ಧಾರವಾಡ: ‘ನಾಯಕರನ್ನು ಮಾಡುವುದು ರಾಜ್ಯದ ಜನರೇ ಹೊರತು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅಲ್ಲ’ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹರಿಹಾಯ್ದರು.
ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜ ಶನಿವಾರ ಆಯೋಜಿಸಿದ್ದ ಪ್ರವರ್ಗ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿದ ಸಮಾಜದ ಬಂಧುಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಯತ್ನಾಳ್ ಹೇಳುವುದು ಸುಳ್ಳು ಎಂದು ಅರುಣ್ ಸಿಂಗ್ ಹೇಳುತ್ತಾರೆ. ಶಾಸಕರ ಭಾವನೆ ತಿಳಿದುಕೊಳ್ಳದಿದ್ದರೆ ಅವರು ಉಸ್ತುವಾರಿ ಇದ್ದು ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.
‘ನಾನು ಮುಖ್ಯಮಂತ್ರಿ ಸ್ಥಾನದ ಅಪೇಕ್ಷೆ ಪಟ್ಟಿಯಲ್ಲಿ ಇಲ್ಲ. ಆದರೆ ಪಕ್ಷ ಯಾವ ರೀತಿಯ ನಿರ್ಣಯ ತೆಗೆದುಕೊಳ್ಳುತ್ತದೋ ಹೇಳಲಾಗದು. ಆದರೆ ಖಂಡಿತವಾಗಿಯೂ ನಿರ್ಣಯ ತೆಗೆದುಕೊಳ್ಳಲಿದೆ. ಅದು ಮೇ 2ರ ಹೊತ್ತಿಗೆ ಗೊತ್ತಾಗಲಿದೆ’ ಎಂದರು.
‘ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದೆ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ಬಿಜೆಪಿ ಬಹುತೇಕ ಶಾಸಕರಿಗೆ ಸಮಾಧಾನ ಇಲ್ಲ. ಶಾಸಕರ ಕೆಲಸ ಆಗುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯುತ್ತಿಲ್ಲ. ಸಭೆ ಕರೆದರೆ ಎಲ್ಲರೂ ಮುಗಿಬೀಳುತ್ತಾರೆ ಎಂಬ ಭಯ ಯಡಿಯೂರಪ್ಪ ಅವರಿಗೆ ಇದೆ’ ಎಂದು ಯತ್ನಾಳ ಹೇಳಿದರು.
‘ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ಅರುಣ್ ಸಿಂಗ್ ಅವರಿಗೆ ಪ್ರೀತಿ ಏಕೋ ತಿಳಿಯದು. ಅದು ಆ ಮಹಾಲಕ್ಷ್ಮಿ ತಾಯಿ ಧನಲಕ್ಷ್ಮಿಗೇ ಗೊತ್ತು. ಆದರೆ ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡುವುದೇ ಯಡಿಯೂರಪ್ಪ ಅವರ ಕೊನೆಯ ಕನಸು. ಧೃತರಾಷ್ಟ್ರ ತನ್ನ ಮಗ ದುರ್ಯೋಧನ ಅಯೋಗ್ಯನಾಗಿದ್ದರೂ ಪಟ್ಟಕ್ಕೇರಿಸಿದ್ದ. ಅದೇ ಕೆಲಸವನ್ನು ಯಡಿಯೂರಪ್ಪ ಮಾಡಲು ಹೊರಟಿದ್ದಾರೆ. ಶೀಘ್ರವೇ ಅವರ ಕುಟುಂಬ ರಾಜಕಾರಣ ಕೊನೆಯಾಗಲಿದೆ’ ಎಂದರು.
ಇದಕ್ಕೂ ಮೊದಲು ಮಾತನಾಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಯತ್ನಾಳ ಅವರ ಉಚ್ಛಾಟನೆ ಖಂಡಿತಾ ಆಗುವುದಿಲ್ಲ. ಅವರು ಪಕ್ಷದ ವಿರುದ್ಧ ಮಾತನಾಡಿಲ್ಲ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಯತ್ನಾಳ ಗೌಡರ ಬಗ್ಗೆ ಅರುಣ ಸಿಂಗ್ ಅವರಿಗೂ ಕಳಕಳಿ ಇದೆ. ಪ್ರಧಾನಿ ಹಾಗೂ ಅಮಿತ್ ಶಾ ಅವರ ಹೃದಯದಲ್ಲೂ ಯತ್ನಾಳ ಅವರ ಕುರಿತು ಅಭಿಮಾನವಿದೆ. ಅವರು ಎಂದಿಗೂ ಕೈಬಿಡುವುದಿಲ್ಲ’ ಎಂದರು.
‘ಲಿಂಗಾಯತರು ಅಂದರೆ ಶೆಟ್ಟರ್, ಯಡಿಯೂರಪ್ಪ ಅಂತ ತಿಳಿದಿದ್ದರು. ಆದರೆ ನಿಜವಾದ ಲಿಂಗಾಯತ ಯಾರೂ ಅನ್ನುವುದು ಅವರಿಗೂ ಈಗ ಗೊತ್ತಾಗಿದೆ. ಅರುಣ ಸಿಂಗ್ ಅವರಿಗೆ ಆಗಿರುವ ತಪ್ಪು ತಿಳಿವಳಿಕೆ ಸರಿಪಡಿಸುವ ಪ್ರಯತ್ನ ಮಾಡಲಾಗುವುದು’ ಎಂದು ಸ್ವಾಮೀಜಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.