ಹುಬ್ಬಳ್ಳಿ: ಇಲ್ಲಿನ ಪ್ರತಿಷ್ಠಿತ ಮಠದ ಟ್ರಸ್ಟಿ ಡಾ. ಬಸನಗೌಡ ಸಂಕನಗೌಡ ಅವರಿಗೆ ಬ್ಲ್ಯಾಕ್ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹುಬ್ಬಳ್ಳಿಯ ಎಪಿಎಂಸಿ ಪೊಲೀಸರು ‘ಯುಕೆ ಟೈಮ್ಸ್’ ಎಂಬ ಸುದ್ದಿವಾಹಿನಿ ಕ್ಯಾಮೆರಾಮನ್ ಚೇತನ್ ಬಳ್ಳಾರಿಯನ್ನು ಬಂಧಿಸಿದ್ದಾರೆ.
ವಿದ್ಯಾನಗರ ನಿವಾಸಿಯಾದ ಚೇತನ್ನಿಂದ ಕೃತ್ಯಕ್ಕೆ ಬಳಸಿದ ಕ್ಯಾಮೆರಾ ಹಾಗೂ ಗುರುತಿನ ಚೀಟಿ ಜಪ್ತಿ ಮಾಡಲಾಗಿದ್ದು, ನ್ಯಾಯಾಂಗ ಬಂಧನ ಕಳಿಸಲಾಗಿದೆ. ಇದಕ್ಕೂ ಮುಂಚೆ ಈತ ಅಮೋಘ ಹಾಗೂ ಫೋಕಸ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಐವರನ್ನು ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಬೆಂಗಳೂರಿನ ಶ್ರೀರಾಮ್ ಎಂಬಾತನಿಗೆ ಬಲೆ ಬೀಸಲಾಗಿದೆ ಎಂದು ಹೇಳಿದರು.
ಡಾ. ಬಸನಗೌಡ ಸಂಕನಗೌಡ ಅವರು, ಮಹಿಳೆಯೊಬ್ಬರ ಜತೆ ಇದ್ದಾಗಿನ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್ಮೇಲ್ ಮಾಡಿದ್ದ ಆರೋಪಿಗಳು, ₹10 ಲಕ್ಷ ವಸೂಲಿ ಮಾಡಿದ್ದರು. ಬಳಿಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಬಸನಗೌಡ ಅವರು ಪೊಲೀಸರಿಗೆ ದೂರು ನೀಡಿದ್ದರು.