ಹುಬ್ಬಳ್ಳಿ: ತೀವ್ರ ಹದಗೆಟ್ಟಿರುವ ಹಳೇ ಹುಬ್ಬಳ್ಳಿಯ ಆನಂದನಗರದ ರಸ್ತೆಯ ಗುಂಡಿಗಳನ್ನು ಮುಚ್ಚಲು ಆಗ್ರಹಿಸಿ, ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಮಂಗಳವಾರ ಗುಂಡಿಗಳಲ್ಲಿ ಸಸಿ ನೆಟ್ಟು ಪ್ರತಿಭಟಿಸಿದರು.
ಬಿಡದೆ ಸುರಿದ ಮಳೆಯಿಂದಾಗಿ ಕಾರವಾರ ರಸ್ತೆ, ಗಿರಣಿಚಾಳ, ಹೆಗ್ಗೇರಿ, ಕೆ.ಎಚ್.ಬಿ ಕಾಲೊನಿ ಕ್ರಾಸ್, ಮಂಜುನಾಥನಗರದ ಮೂಲಕ, ಗೋಕುಲ ರಸ್ತೆ ಸಂಪರ್ಕಿಸುವ ಈ ರಸ್ತೆ ಗುಂಡಿಗಳಿಂದ ಆವರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪಾಲಿಕೆ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ರೇವಣಸಿದ್ದಪ್ಪ ಎಂ. ಹೊಸಮನಿ, ‘ಹದಗೆಟ್ಟ ರಸ್ತೆಗಳಿಗೆ ಪಾಲಿಕೆ ಕಾಟಾಚಾರಕ್ಕೆ ಕಲ್ಲು ಮತ್ತು ಮಣ್ಣು ಹಾಕಿ ತೇಪೆ ಹಾಕುವ ಕೆಲಸ ಮಾಡಿದೆ. ಮೂರ್ನಾಲ್ಕು ದಿನದಲ್ಲೇ ಅದೂ ಕಿತ್ತು ಹೋಗಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು.
‘ಕೂಡಲೇ ರಸ್ತೆಯನ್ನು ದುರಸ್ತಿ ಮಾಡಬೇಕು. ಇಲ್ಲದಿದ್ದರೆ, ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪಕ್ಷದ ನಿಸಾರ ಅಹ್ಮದ ಮುಲ್ಲಾ, ಅಫ್ಜಲ್ ಕರಮಡಿ, ಜಾಕೀರ, ಮೆಹಬೂಬ ನದಾಫ ಇದ್ದರು.