ಹುಬ್ಬಳ್ಳಿ: ‘ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಬಯಸುವವರಿಗೆ ರಕ್ತದಾನ ಸುಲಭದ ಮಾರ್ಗವಾಗಿದೆ. ರಕ್ತ ದೇವರ ದೇಣಿಗೆಯಾಗಿದ್ದು, ಅದನ್ನು ದಾನ ಮಾಡುವುದು ದೇವರಿಗೆ ಸೇವೆ ಸಲ್ಲಿಸಿದಂತೆ’ ಎಂದು ಶ್ರೀಮಾತಾ ಆಶ್ರಮದ ಮಾತಾಜಿ ತೇಜೋಮಯಿ ಹೇಳಿದರು.
ನಗರದ ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ಮಂಗಳವಾರ ರಕ್ತದಾನಿಗಳ ದಿನದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು,‘ಲಾಭ–ನಷ್ಟವನ್ನು ಲೆಕ್ಕಿಸದೆ ಮಾಡುವ ನಿಸ್ವಾರ್ಥ ದಾನ ರಕ್ತದಾನವಾಗಿದೆ. ಇದರಿಂದ, ರಕ್ತಶುದ್ಧಿ ಜೊತೆಗೆ ಮನಶುದ್ಧಿಯೂ ಆಗುತ್ತದೆ. ಸ್ವಾಮಿ ವಿವೇಕಾನಂದರು ಬೋಧಿಸಿದ ತ್ಯಾಗ ಹಾಗೂ ಸೇವೆಯ ತತ್ವಗಳನ್ನು ಪಾಲಿಸಿದಂತಾಗುತ್ತದೆ’ ಎಂದರು.
ರಕ್ತ ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ಮಾತನಾಡಿದರು. 100ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಶ್ರೀಧರ ಜೋಶಿ, ವಿನೋದ ಪಟ್ವಾ, ಕಿರಣ ಗಡ ರವಿ ನಾಯಕ, ಡಾ. ಪಿ.ಎನ್. ಬಿರಾದಾರ, ಅರುಣಕುಮಾರ ನಾಯ್ಕ ಹಾಗೂ ಮುಖೇಶ ಜೈನ್ ಇದ್ದರು.