ನವಲಗುಂದ: ‘ಚಾಂಗ್ದೇವ್ ಮಹಾರಾಜ ಕೀ ಜಯ, ರಾಜಾ ಭಕ್ಷಾಕಿ ದೋಸ್ತರ ಹೊ ದಿನ...’ ಎನ್ನುವ ಹರ್ಷೋದ್ಘಾರದ ನಡುವೆ ಸೋಮವಾರದ ಯಮನೂರಿನ ಚಾಂಗ್ದೇವ್ ಮಹಾರಾಜ ಉರ್ಫ್ ರಾಜ ಭಾಗಸವಾರ ಸಂದಲ(ಗಂಧ) ಉರುಸ್ ನಡೆಯಿತು.
ಲಕ್ಷಾಂತರ ಭಕ್ತರು ಬೆಣ್ಣಿಹಳ್ಳದಲ್ಲಿ ಪುಣ್ಯಸ್ನಾನ ಮಾಡಿದರು. ನಂತರ ಸರದಿ ಸಾಲಿನಲ್ಲಿ ನಿಂತು ಚಾಂಗ್ದೇವರ ದರ್ಶನ ಪಡೆದರು. ಮುಕ್ತುಂ ಸಕ್ಕರೆ, ಮಕ್ಕಳ ಆಟಿಕೆ ಸಾಮಾನು, ಜೋಕಾಲಿ, ವಿವಿಧ ಮಿಠಾಯಿ ಅಂಗಡಿಗಳಲ್ಲಿ ವ್ಯಾಪಾರ ಬಲು ಜೋರಾಗಿ ನಡೆಯಿತು.
ಜವಳಿ ಕೈಮಗ್ಗ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ದಂಪತಿ ಸಮೇತ ಆಗಮಿಸಿ ಚಾಂಗ್ದೇವರ ದರ್ಶನ ಪಡೆದರು. ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾ ಯುವಘಟಕ ಅಧ್ಯಕ್ಷ ವಿನೋದ ಅಸೂಟಿ, ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ, ಪುರಸಭೆ ಸದಸ್ಯರು ಸಂತರ ಜೊತೆಗೆ (ಸಂದಲ) ಗಂಧದಲ್ಲಿ ಪಾಲ್ಗೊಂಡಿದ್ದು ವಿಶೇಷ.