ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಸಿಎಆರ್ ಮೈದಾನದಲ್ಲಿ ನಡೆದ ಹು–ಧಾ ಪೊಲೀಸ್ ಕಮಿಷನರೇಟ್ ಘಟಕದ ವಾರ್ಷಿಕ ಕ್ರೀಡಾಕೂಟದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ತಂಡವು 84 ಅಂಕ ಗಳಿಸಿತು.
ಮಹಿಳೆಯರ ವಿಭಾಗದಲ್ಲಿ ದಕ್ಷಿಣ ವಲಯದ ಶ್ರುತಿ ಅಕ್ಕೊಳ್ಳಿ ವೀರಾಗ್ರಣಿ ಪ್ರಶಸ್ತಿ ಪಡೆದರೆ, ಪುರುಷ ವಿಭಾಗದಲ್ಲಿ ಸಶಸ್ತ್ರ ಮೀಸಲು ಪಡೆಯ ಐ.ಎಸ್. ದೇಸಾಯಿ ಸತತ 13ನೇ ಬಾರಿ ವೀರಾಗ್ರಣಿ ಪ್ರಶಸ್ತಿ ಪಡೆದರು.
ವಾಲಿಬಾಲ್ನಲ್ಲಿ ಉತ್ತರ ತಂಡ (ಪ್ರಥಮ), ಸಿಎಆರ್ ತಂಡ (ದ್ವಿತೀಯ), ಕಬಡ್ಡಿ: ಸಿಎಆರ್ ತಂಡ (ಪ್ರಥಮ), ದಕ್ಷಿಣ ತಂಡ (ದ್ವಿತೀಯ), ಹಗ್ಗಜಗ್ಗಾಟ: ಸಿಎಆರ್ ತಂಡ (ಪ್ರಥಮ), ಉತ್ತರ ತಂಡ (ದ್ವಿತೀಯ) ಗೆಲುವು ಸಾಧಿಸಿತು.
ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್ ಪಾರಿತೋಷಕ ಹಾಗೂ ಪ್ರಮಾಣಪತ್ರ ವಿತರಿಸಿದರು.
ಬಹುಮಾನ ವಿತರಿಸಿ ಮಾತನಾಡಿದ ಡಿ.ವಿ. ಗುರುಪ್ರಸಾದ್, ‘ಪೊಲೀಸರು ಕಾರ್ಯದೊತ್ತಡದ ನಡುವೆಯೂ ವ್ಯಾಯಾಮಕ್ಕೆ ಆದ್ಯತೆ ನೀಡಬೇಕು. ಸಾರ್ವಜನಿಕರು ನೆನೆಯುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.
ಕಮಿಷನರ್ ಲಾಭೂರಾಮ್ ಮಾತನಾಡಿ, ‘ಕ್ರೀಡಾ ಮನೋಭಾವದಿಂದ ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡು, ಕ್ರೀಡಾ ಸ್ಫೂರ್ತಿ ಮೆರೆದಿರುವುದು ಸಂತಸದ ಸಂಗತಿ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಡಿ.ವಿ. ಗುರುಪ್ರಸಾದ್ ಅವರು ಬರೆದ ‘ಸಿಸ್ಟರ್ ಅಭಯಾ ಸಾವು: ಕೊಲೆಯೋ? ಆತ್ಮಹತ್ಯೆಯೋ?’ ಪುಸ್ತಕ ಬಿಡುಗಡೆ ಮಾಡಲಾಯಿತು. ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ್, ಎಸಿಪಿಗಳು, ಇನ್ಸ್ಪೆಕ್ಟರ್ಗಳು ಹಾಗೂ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಇದ್ದರು.