ಚೆನ್ನೈ: ಸಮಾಜ ಸುಧಾರಕ ಪೆರಿಯಾರ್ ಪುತ್ಥಳಿ ಭಗ್ನಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಸಿಆರ್ಪಿಎಫ್ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.
ಬಂಧಿತ ಸಿಆರ್ಪಿಎಫ್ ಸಿಬ್ಬಂದಿ ಸೆಂಥಿಲ್ ಕುಮಾರ್ ಚಂಡೀಗಡದಲ್ಲಿ ಕರ್ತವ್ಯದಲ್ಲಿದ್ದು, ಸ್ವಗ್ರಾಮಕ್ಕೆ ಬಂದಾಗ ಈ ಕೃತ್ಯ ಎಸಗಿದ್ದಾರೆ.
‘ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಕುಮಾರ್ ಅವರು ಪುತ್ಥಳಿ ಭಗ್ನಗೊಳಿಸಿರುವುದು ಗೊತ್ತಾಗಿದೆ. ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಮನೆಯ ಸಮೀಪ ಪೆರಿಯಾರ್ ಪುತ್ಥಳಿ ಪ್ರತಿಷ್ಠಾಪನೆ ಮಾಡುತ್ತಿರುವುದಕ್ಕೆ 2013ರಲ್ಲಿ ಕುಮಾರ್ ವಿರೋಧ ವ್ಯಕ್ತಪಡಿಸಿದ್ದ ಮತ್ತು ಅದರನ್ನು ಭಗ್ನಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪಳನಿಸ್ವಾಮಿ ಮಾಹಿತಿ ನೀಡಿದ್ದಾರೆ.
ಇಂತಹ ಕೃತ್ಯಗಳು ಖಂಡನೀಯ. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪುತ್ಥಳಿ ಭಗ್ನಗೊಳಿಸಿರುವ ವಿಷಯವನ್ನು ವಿರೋಧ ಪಕ್ಷ ಡಿಎಂಕೆ ವಿಧಾನಸಭೆಯಲ್ಲಿ ಪ್ರಶ್ನಿಸಿತ್ತು.
ಸಮಾಜ ಸುಧಾರಕ ಪೆರಿಯಾರ್ ಅವರ ಪುತ್ಥಳಿಯನ್ನು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಅಲಂಗುಡಿಯಲ್ಲಿ ಮಂಗಳವಾರ ಭಗ್ನಗೊಳಿಸಲಾಗಿತ್ತು.