ತಿರುವನಂತಪುರ: ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ರಾಧಾಕೃಷ್ಣನ್ ಸದನಕ್ಕೆ ಬುಧವಾರ ಅಶ್ರುವಾಯು ಶೆಲ್ ತಂದಿದ್ದರು.
ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಅಸ್ತ್ರಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ನಿರೂಪಿಸಲು ರಾಧಾಕೃಷ್ಣನ್ ತಮ್ಮ ಚೀಲದಿಂದ ಅಶ್ರುವಾಯು ಶೆಲ್ ಹೊರತೆಗೆದರು.
ಶಸ್ತ್ರಾಸ್ತ್ರ ಮತ್ತು ಸಿಡಿಮದ್ದುಗಳನ್ನು ಸದನಕ್ಕೆ ತರುವುದು ಅಪರಾಧ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಸಿದರು. ಕೂಡಲೇ ಅವರು ಅಶ್ರುವಾಯು ಶೆಲ್ ಅನ್ನು ಸ್ಪೀಕರ್ಗೆ ಹಸ್ತಾಂತರಿಸಿದರು.
ಪೊಲೀಸರು ಇತ್ತೀಚೆಗೆ ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಈ ಅಶ್ರುವಾಯು ಶೆಲ್ ಪ್ರಯೋಗಿಸಿದ್ದರು.
ಸಿಬಿಐಗೆ ಹಸ್ತಾಂತರ
ಕಳೆದ ತಿಂಗಳು ಅಮಾನುಷವಾಗಿ ಕೊಲೆಯಾಗಿದ್ದ ಕಣ್ಣೂರು ಜಿಲ್ಲೆಯ ಮತ್ತನೂರು ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯದರ್ಶಿ ಶುಹೇಬ್ ಹತ್ಯೆ ಪ್ರಕರಣದ ತನಿಖೆಯನ್ನು ಕೇರಳ ಹೈಕೋರ್ಟ್ ಬುಧವಾರ ಸಿಬಿಐಗೆ ವಹಿಸಿದೆ.
ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಶುಹೇಬ್ ಕುಟುಂಬ ಸದಸ್ಯರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅವರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಈ ಮೊದಲು ರಾಜ್ಯ ಸರ್ಕಾರ ಶುಬೇಬ್ ಕುಟುಂಬದ ಮನವಿಯನ್ನು ತಳ್ಳಿ ಹಾಕಿತ್ತು.