ಹುಬ್ಬಳ್ಳಿ: ‘ಹಿಂದುಳಿದ ಸೂರ್ಯವಂಶ ಕ್ಷತ್ರಿಯ ಕಲಾಲ್ ಖಾಟಿಕ ಸಮುದಾಯದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು. ಪರಸ್ಪರ ಸಹಕಾರದೊಂದಿಗೆ ಕೈ ಜೋಡಿಸಿದಾಗ ಮಾತ್ರ ಸಮುದಾಯ ಮುಂದಕ್ಕೆ ಬರುತ್ತದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಸೂರ್ಯವಂಶ ಕ್ಷತ್ರಿಯ ಕಲಾಲ್ ಖಾಟಿಕ ಸೇವಾ ಸಮಿತಿಯ ಬೆಳ್ಳಿ ಮಹೋತ್ಸವ ಅಂಗವಾಗಿ, ನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ ಶಿಕ್ಷಣದಿಂದ ಮಾತ್ರ ಪರಿವರ್ತನೆ ಸಾಧ್ಯ. ಹಾಗಾಗಿ, ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಇದಕ್ಕೆ ತಮ್ಮಿಂದ ಸಾಧ್ಯವಾದ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ, ನೋಟ್ ಬುಕ್ಗಳನ್ನು ವಿತರಿಸಲಾಯಿತು. ಉನ್ನತ ಶಿಕ್ಷಣ ಪಡೆದು ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಸಮುದಾಯದವರನ್ನು ಸನ್ಮಾನಿಸಲಾಯಿತು.
ಸಮುದಾಯದ ನಾನಾಜಿರಾವ ಮೈದರ್ಕರ, ಸುಭಾಷ ಕಲ್ಯಾಣಕರ, ಸುರೇಶಕುಮಾರ ಪೂಜೆಕಾರಿ, ಗೋವಿಂದರಾಜು ಕುಂಕುಂಕಾರ, ಮದನ ಮಲ್ಕಾರಿ, ನಾಗರತ್ನಾ ಹರೇಝೆಡೇಕರ, ಪ್ರಕಾಶ ಕಂಬ್ಲೇಕರ, ದುರ್ಗಾಜಿ ಕೊತಾಂಬ್ರಿಕರ, ಅಶೋಕ ಹರೇಝೆಡೇಕರ, ಚಂದ್ರು ತೆಕ್ಕಲಕೋಟೆ, ಲಕ್ಷ್ಮಣ ಡೊಂಗ್ರೇಕರ ಇದ್ದರು.