ಹುಬ್ಬಳ್ಳಿ: ಮತಾಂತರ ನಿಷೇಧ ಮಸೂದೆಯನ್ನು ಬೆಳಗಾವಿಯ ನಡೆಯುತ್ತಿರುವ ಅಧಿವೇಶನದಲ್ಲಿ ಮಂಡಿಸಿ,ಸದನದಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಶಾಸಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕಾಂಗ್ರೆಸ್ ವಿರೋಧ ಇದ್ದೇ ಇರುತ್ತದೆ. ಆದರೆ, ಈಗಾಗಲೇ ಹಲವು ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಇದೆ. ಹೀಗಾಗಿ, ಇಲ್ಲಿಯೂ ಕಾಯ್ದೆ ಜಾರಿ ಮಾಡುವ ಅಪೇಕ್ಷೆ ಇದೆ ಎಂದರು.
ಪರಿಷತ್ ನಲ್ಲಿ ಬಹುಮತ: ಪರಿಷತ್ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ 15 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ. ಆ ಮೂಲಕ ಪರಿಷತ್ನಲ್ಲೂ ಬಹುಮತ ದೊರೆಯಲಿದೆ ಎಂದರು.
ಬಲವಂತ ತಡೆಯಲು ಕಾಯ್ದೆ:
‘ಬಲವಂತವಾಗಿ ಮತಾಂತರ ಮಾಡಲು ಮುಂದಾದವರಿಗೆ ಶಿಕ್ಷೆ ವಿಧಿಸಲು ಕಾಯ್ದೆ ಜಾರಿಗೆ ತರಲಾಗುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯೆ ತಾರಾ ಹೇಳಿದರು.
‘ಆಸೆ ಒಡ್ಡಿ ಮತಾಂತರ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ವೈಯಕ್ತಿಕ ನಿರ್ಧಾರ ಸರಿ ಆದರೂ, ಅದನ್ನು ಬಲವಂತವಾಗಿ ತೆಗೆದುಕೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ’ ಎಂದರು.