ನವಲಗುಂದ: ಅವಧಿ ಮುಗಿದರೂ ಪುರಸಭೆ ಅಧ್ಯಕ್ಷರು ರಾಜೀನಾಮೆ ನೀಡದೆ ಕೈಗೆ ಸಿಗದೆ ಓಡಾಡುತ್ತಿದ್ದಾರೆ. ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಗುರುವಾರ ಅಧ್ಯಕ್ಷರ ಕೊಠಡಿ ಸಾಂಕೇತಿಕ ಧರಣಿ ನಡೆಸಿದರು.
ಬಿಜೆಪಿ ಮುಖಂಡ ರಾಯನಗೌಡ ಪಾಟೀಲ ಮಾತನಾಡಿ ‘ಪುರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಪರಸ್ಪರ ಒಪ್ಪಂದ ಮಾಡಿಕೊಂಡು ಮೊದಲ 30 ತಿಂಗಳ ಅವಧಿಯಲ್ಲಿ ತಲಾ 15 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಮಾತುಕತೆಯಾಗಿತ್ತು. ಆದರೆ ಕಾಂಗ್ರಸ್ ಮುಖಂಡರು ಹಾಗೂ ಪುರಸಭೆ ಅಧ್ಯಕ್ಷರು ಮಾತುಕತೆಗೆ ಮುಂದಾಗದೆ ಮಾತು ತಪ್ಪಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಸೋಮವಾರರಿಂದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿ, ಪುರಸಭೆ ಸದಸ್ಯರಾದ ಬಸವರಾಜ ಕಟ್ಟಿಮನಿ, ಮಾಹಾಂತೇಶ ಕಲಾಲ,ಶರಣಪ್ಪ ಹಕ್ಕರಕಿ, ಸುಮಂಗಲಾ ಬೆಂಡಿಗೇರಿ, ಜ್ಯೋತಿ ಗೊಲ್ಲರ, ನಾಮನಿರ್ದೇಶಿತ ಸದಸ್ಯರಾದ ಗೀತಾ ಜನ್ನರ, ಬಿ.ಎಂ.ತೋಟದ, ಅಡಿವೆಪ್ಪ ಶಿರಸಂಗಿ, ರಾಜು ಜಾಲಿಹಾಳ ಇದ್ದರು.
ಚರ್ಚಿಸಿ ನಿರ್ಧಾರ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಈಗಾಗಲೇ ಬಿಜೆಪಿ ಸದಸ್ಯರು ಹೇಳಿದ್ದಾರೆ. ನನ್ನ ಅವಧಿ ಫೆ. 4ರಂದು ಮುಕ್ತಾಯವಾಗಿದೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರದಂತೆ ನಡೆದುಕೊಳ್ಳುವೆ ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.