ಧಾರವಾಡ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯ ಸಾಧನೆಯ ಆಧಾರದಲ್ಲಿ 2021ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕರಾಗಿರುವ ನಗರದ ಉಳವಿ ಚನ್ನಬಸವೇಶ್ವರ ಬಡಾವಣೆಯ ಸೌರಭ್ ನರೇಂದ್ರ ಅವರು, 2022ರ ಪರೀಕ್ಷೆಯಲ್ಲಿ 198ನೇ ರ್ಯಾಂಕ್ ಪಡೆದಿದ್ದಾರೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಹೊಂದಿರುವ ಸೌರಭ್, ಖಾಸಗಿ ವಲಯದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಿಂದ ನಿರಂತರವಾಗಿ ಲೋಕಸೇವಾ ಆಯೋಗ ಪರೀಕ್ಷೆ ಎದುರಿಸಿರುವ ಇವರು, 2019ರಲ್ಲಿ ಮುಖ್ಯ ಪರೀಕ್ಷೆ ಪಾಸು ಮಾಡಿದ್ದರು. 2021ರಲ್ಲಿ ಏಳು ಅಂಕಗಳಲ್ಲಿ ಅವಕಾಶ ವಂಚಿತರಾದ ಇವರಿಗೆ, ಭಾರತೀಯ
ಕ್ರೀಡಾ ಪ್ರಾಧಿಕಾರದ ಸಂದರ್ಶನದಲ್ಲಿ ಸಹಾಯಕ ನಿರ್ದೇಶಕ ಹುದ್ದೆ ಪಡೆದಿದ್ದರು. ಸದ್ಯ ಪುದುಚೇರಿಯಲ್ಲಿ ಕರ್ತವ್ಯದಲ್ಲಿದ್ದಾರೆ.
ತಂದೆ ಅಮೃತ ನರೇಂದ್ರ ಅವರು ವಿಮಾ ಏಜೆಂಟ್ ಆಗಿದ್ದಾರೆ. ತಾಯಿ ಸುನೀತಾ ಹಾಗೂ ತಮ್ಮ ಅಮೋಘ ಇದ್ದಾರೆ. ‘ಇಲ್ಲಿಯವರೆಗೂ ಪಟ್ಟ ಪ್ರಯತ್ನಕ್ಕೆ ತಕ್ಕ ಫಲ ದೊರೆತಿದೆ’ ಎಂದು ತಿಳಿಸಿದರು.