ಧಾರವಾಡ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ಜಿಲ್ಲೆಯ ಮುಮ್ಮಿಗಟ್ಟಿ ಬಳಿ ತಂಪು ಪಾನೀಯ ತಯಾರಿಕಾ ಉದ್ಯಮ ಸ್ಥಾಪನೆಗೆ ಮುಂದಾಗಿದ್ದು, ಈಚೆಗೆ ಸ್ಥಳ ವೀಕ್ಷಿಸಿದ್ದಾರೆ.
‘ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿ ಸಮೀಪ ಕೈಗಾರಿಕಾ ಘಟಕ ಸ್ಥಾಪನೆಗೆ 13.5 ಎಕರೆ ಜಾಗ ಒದಗಿಸಲು ಸರ್ಕಾರ ಅನುಮೋದನೆ ನೀಡಿದೆ. ಸಿಲೋನ್ ಬಿವರೇಜ್ ಕೆನ್ ಪ್ರೈವೆಟ್ ಲಿಮಿಟೆಡ್ ಅಧ್ಯಕ್ಷ ಮುತ್ತಯ್ಯ ಮುರಳೀಧರನ್ ಅವರು ಮೊದಲ ಹಂತದಲ್ಲಿ ₹ 256 ಕೋಟಿ ವೆಚ್ಚದಲ್ಲಿ ಘಟಕ ಆರಂಭಕ್ಕೆ ತಯಾರಿ ನಡೆಸಿದ್ಧಾರೆ’ ಎಂದು ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿ ಬಿ.ಟಿ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೂರು ಹಂತದಲ್ಲಿ ₹ 950 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪನೆಗೆ ಯೋಜನೆ ಸಿದ್ಧಪಡಿಸಿರುವ ಅವರು ಸೆಪ್ಟೆಂಬರ್ನಲ್ಲಿ ಪ್ರಕ್ರಿಯೆ ಆರಂಭಿಸುವ ಸಾಧ್ಯತೆಯಿದೆ’ ಎಂದರು.
‘ಕೆಲ ತಿಂಗಳ ಹಿಂದೆಯೇ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದ ಮುತ್ತಯ್ಯ ಅವರು ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಕ್ಲಸ್ಟರ್ನಲ್ಲಿ (ಎಫ್ಎಂಸಿಜಿ) ಕೈಗಾರಿಕಾ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ಘಟಕದ ಮೊದಲ ಹಂತದಲ್ಲಿ 200 ಸ್ಥಳೀಯರಿಗೆ ಉದ್ಯೋಗ ಸಿಗಲಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.