ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ವಲಯ ಚಾಂಪಿಯನ್‌

ಎಸ್‌.ಎ. ಶ್ರೀನಿವಾಸನ್‌ ಸ್ಮಾರಕ ಕ್ರಿಕೆಟ್‌ ಟೂರ್ನಿ
Last Updated 26 ಅಕ್ಟೋಬರ್ 2021, 4:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ದಾಖಲಿಸಿದ ಧಾರವಾಡ ವಲಯ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಬೆಂಗಳೂರಿನಲ್ಲಿ ಆಯೋಜಿಸಿದ್ದ 25 ವರ್ಷದ ಒಳಗಿನವರ ಎಸ್‌.ಎ. ಶ್ರೀನಿವಾಸನ್‌ ಸ್ಮಾರಕ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ.

ಸೋಮವಾರ ನಡೆದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಧಾರವಾಡ ವಲಯ ತುಮಕೂರು ವಲಯ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ತುಮಕೂರು ವಲಯ 49.5 ಓವರ್‌ಗಳಲ್ಲಿ 195 ರನ್‌ ಗಳಿಸಿತು. ಈ ಗುರಿಯನ್ನು ಧಾರವಾಡ ವಲಯ 31.4 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ತಲುಪಿತು. ಸುಧನ್ವ ಕುಲಕರ್ಣಿ (ಅಜೇಯ 50), ವಿಜಯಕುಮಾರ ಪಾಟೀಲ (115) ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸೋಮೇಶ್ವರ ನಾವಳ್ಳಿಮಠ ಹಾಗೂ ರೋಹಿತ್‌ ಕುಮಾರ ತಲಾ ಮೂರು ವಿಕೆಟ್‌ ಉರುಳಿಸಿದರು.

ಸ್ವಪ್ನಿಲ್‌ ಎಳವೆ ನಾಯಕತ್ವದ ಧಾರವಾಡ ವಲಯ ತಂಡ ಟೂರ್ನಿಯಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಒಟ್ಟು 20 ಅಂಕಗಳನ್ನು ಗಳಿಸಿದೆ. ‘ಎ’ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ.

ಈ ವಲಯ ತನ್ನ ಹಿಂದಿನ ಪಂದ್ಯಗಳಲ್ಲಿ ರಾಯಚೂರು, ಅಧ್ಯಕ್ಷರ ಇಲೆವನ್‌, ಬೆಂಗಳೂರು ನಗರ, ಉಪಾಧ್ಯಕ್ಷರ ಇಲೆವನ್‌ ಮತ್ತು ತುಮಕೂರು ವಲಯ ತಂಡಗಳನ್ನು ಮಣಿಸಿ ಈ ಸಾಧನೆ ಮಾಡಿತು. ಒಟ್ಟು 16 ವಿಕೆಟ್‌ಗಳನ್ನು ಕಬಳಿಸಿದ ಧಾರವಾಡ ವಲಯದ ರೋಹಿತ್‌ ಕುಮಾರ ಎ.ಸಿ. ಟೂರ್ನಿಯಲ್ಲಿ ಒಟ್ಟು ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎಂಬ ಗೌರವಕ್ಕೆ ಭಾಜನರಾದರು.

ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ತಲಾ ಆರು ತಂಡಗಳಿದ್ದವು. ಧಾರವಾಡ ವಲಯ ಹೊರತುಪಡಿಸಿ ಉಳಿದ ಯಾವ ತಂಡಗಳ ಕೂಡ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT