ಹುಬ್ಬಳ್ಳಿ: ಅತಿವೃಷ್ಟಿಯಿಂದ ಸಂಕಷ್ಟಕ್ಕೊಳಗಾದ ಇಲ್ಲಿನ ಇಂದಿರಾನಗರ–ಪಡದಯ್ಯನ ಹಕ್ಕಲ ನಿವಾಸಿಗಳಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಾಯೋಜಕತ್ವದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಶನಿವಾರ ತಾಡಪತ್ರಿ ವಿತರಿಸಿದರು.
‘ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ಸ್ವರೂಪದ ಮಳೆ, ಪ್ರವಾಹ ಉಂಟಾಗಿತ್ತು. ಅನೇಕರು ಮನೆ, ಆಸ್ತಿ, ಬೆಳೆ, ಜಾನುವಾರು ಕಳೆದುಕೊಂಡಿದ್ದಾರೆ. ಅವರೆಲ್ಲರೂ ಈಗ ಹೊಸದಾಗಿ ಬದುಕು ಕಟ್ಟಿಕೊಳ್ಳಬೇಕಿದೆ. ಅವರಿಗೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಸದಾ ಬೆನ್ನೆಲುಬಾಗಿ ನಿಲ್ಲಲಿದ್ದಾರೆ’ ಎಂದು ಶೆಟ್ಟರ್ ಹೇಳಿದರು.
ಇಂದಿರಾನಗರ ಹಾಗೂ ಪಡದಯ್ಯನ ಹಕ್ಕಲದ ನಿವಾಸಿಗಳು ಸಹ ಅತಿವೃಷ್ಟಿಯಿಂದಾಗಿ ತೀವ್ರ ಸಮಸ್ಯೆ ಅನುಭವಿಸಿದ್ದಾರೆ. ನಾಲಾದಲ್ಲಿ ಹರಿಯುವ ನೀರು ಮನೆಗಳಿಗೆ ನುಗ್ಗಿದೆ. ಅನೇಕ ಮನೆಗಳ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ಮನೆಯೆಲ್ಲ ಸೋರುವಂತಾಗಿದೆ. ಇದಕ್ಕಾಗಿ ನಿವಾಸಿಗಳಿಗೆ ತಾತ್ಕಾಲಿಕವಾಗಿ ತಾಡಪತ್ರಿ ವಿತರಿಸುತ್ತಿದ್ದೇವೆ’ ಎಂದರು.
‘ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಸಹಯೋಗದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಾಯೋಜಕತ್ವದೊಂದಿಗೆ 20 ಸಾವಿರ ತಾಡಪತ್ರಿ ವಿತರಿಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಅಗತ್ಯವಿದ್ದವರ ಮನೆ ಮನೆಗೆ ತೆರಳಿ ತಾಡಪತ್ರಿ ವಿತರಣೆ ಮಾಡಲಿದ್ದಾರೆ’ ಎಂದು ಮುಖಂಡ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ಶಿವು ಮೆಣಸಿನಕಾಯಿ, ವೀರಭದ್ರಪ್ಪ ಹಾಲಹರವಿ, ಮಲ್ಲಿಕಾರ್ಜುನ ಸಾವಕಾರ, ಚಂದ್ರಶೇಖರ ಗೋಕಾಕ, ಡಿ.ಕೆ.ಚವ್ಹಾಣ, ಸತೀಶ ಶೇಜವಾಡಕರ, ರಂಗಾ ಬದ್ದಿ, ಶಿವು ಮೆಣಸಿನಕಾಯಿ ಇದ್ದರು.