ಹುಬ್ಬಳ್ಳಿ: ಜಿಲ್ಲೆಯಲ್ಲಿರುವ ಕ್ಷತ್ರಿಯ ಸಮಾಜದ ವಿವಿಧ ಪಂಗಡಗಳ ಜನರನ್ನು ಒಂದೆಡೆ ಸೇರಿಸಬೇಕು ಎನ್ನುವ ಉದ್ದೇಶದಿಂದ ಕರ್ನಾಟಕ ಕ್ಷತ್ರಿಯ ಒಕ್ಕೂಟವು ಜು. 7ರಂದು ಬೆಳಿಗ್ಗೆ 10.30ಕ್ಕೆ ಇಂದಿರಾ ಗಾಜಿನಮನೆಯಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಹಮ್ಮಿಕೊಂಡಿದೆ.
ಕ್ಷತ್ರಿಯ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಅಶೋಕ ಕಾಟವೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಜಿಲ್ಲೆಯಲ್ಲಿ ನಮ್ಮ ಸಮಾಜದ 22 ವಿವಿಧ ಪಂಗಡಗಳ ಜನರಿದ್ದಾರೆ. ಅವರನ್ನು ಒಂದೆಡೆ ಸೇರಿಸಬೇಕು. ಸಂಘಟನಾತ್ಮಕ ಶಕ್ತಿ ತೋರಿಸಬೇಕು ಎನ್ನುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಐದರಿಂದ ಆರು ಸಾವಿರ ಜನ ಬರುವ ನಿರೀಕ್ಷೆಯಿದೆ’ ಎಂದರು.
ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಉದಯ ಸಿಂಗ್ ಸಮಾವೇಶ ಉದ್ಘಾಟಿಸಲಿದ್ದಾರೆ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಹಿರಿಯರ ಘಟಕ, ಯುವ ಘಟಕ ಮತ್ತು ಮಹಿಳಾ ಘಟಕದ ಎಲ್ಲ ಪದಾಧಿಕಾರಿಗಳು ಅಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನ ಪಾಲ್ಗೊಳ್ಳಬೇಕು ಎಂದು ಕಾಟವೆ ಮನವಿ ಮಾಡಿದರು.
ಒಕ್ಕೂಟದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಲಕ್ಷ್ಮಣ ಗಂಡಗಾಳೇಕರ, ಸಮಾಜದ ಪ್ರಮುಖರಾದ ಕೇಶವ ಯಾದವ, ಹನುಮಂತಸಾ ನಿರಂಜನ, ವಿಠ್ಠಲ ಚವ್ಹಾಣ, ವಿನೋದ ಪಡತರೆ, ಅಶೋಕ ಕಾಶೇನವರ ಮತ್ತು ಬಸವರಾಜು ಶಿಂಧೆ ಇದ್ದರು.