ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳ ಬಗ್ಗೆ ಪ್ರಚಾರ ನೀಡುವುದು ಪಕ್ಷದ ಮಾಧ್ಯಮ ಪ್ರಕೋಷ್ಠದ ಕರ್ತವ್ಯವಾಗಿದೆ. ಅದನ್ನು ಎಲ್ಲರೂ ಪರಿಣಾಮಕಾರಿಯಾಗಿ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸಲಹೆ ನೀಡಿದರು.
ದೇಶಪಾಂಡೆ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಹುಬ್ಬಳ್ಳಿ-ಧಾರವಾಡ, ಧಾರವಾಡ ಗ್ರಾಮಾಂತರ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಮಾಧ್ಯಮ ವಿಭಾಗದ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಧಾರವಾಡ ವಿಭಾಗವು ಮಾಧ್ಯಮದ ಹಿತದೃಷ್ಠಿಯಿಂದ ಇನ್ನಷ್ಟು ಬಲಶಾಲಿಯಾಗಬೇಕಿದೆ’ ಎಂದರು.
‘ಬೆಂಗಳೂರು ನಂತರರಾಜ್ಯದಲ್ಲಿ ಹುಬ್ಬಳ್ಳಿಯು ಮಾಧ್ಯಮ ಪ್ರಕೋಷ್ಠವು ಎರಡನೇ ಪ್ರಮುಖ ಕೇಂದ್ರವಾಗಿದೆ. ಜಿಲ್ಲೆಗಳಲ್ಲಿ ವಕ್ತಾರರು, ಸಹ ವಕ್ತಾರರು, ಸಂಚಾಲಕರು ಹಾಗೂ ಸಹ ಸಂಚಾಲಕರ ಪಾತ್ರ ಮಹತ್ವದಾಗಿದ್ದು, ಪಕ್ಷದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ’ ಎಂದು ಹೇಳಿದರು.
‘ಸಂಘಟನೆಯೇಪಕ್ಷದ ಶಕ್ತಿಯಾಗಿದೆ. ಹಾಗಾಗಿ, ಪ್ರಕೋಷ್ಠದ ಪದಾಧಿಕಾರಿಗಳು ಮಾಧ್ಯಮದವರೊಂದಿಗೆ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು. ಪಕ್ಷದ ಹಾಗೂ ಸರ್ಕಾರದ ಸಾಧನೆಗಳನ್ನು ಅವರ ಗಮನಕ್ಕೆ ತರುವ ಜೊತೆಗೆ, ಅವರ ಸಲಹೆ–ಸೂಚನೆಗಳನ್ನು ಸಹ ಪಡೆಯಬೇಕು’ ಎಂದರು.
ಪಕ್ಷದ ಮಾಧ್ಯಮ ಸಮಿತಿ ಸದಸ್ಯ ಪ್ರಶಾಂತ ಕೆ., ಸಿದ್ದು ಮೊಗಲಿಶೆಟ್ಟರ, ಜಿಲ್ಲಾ ವಕ್ತಾರ ರವಿ ನಾಯಕ, ಹಾವೇರಿ ಜಿಲ್ಲಾ ವಕ್ತಾರ ಪ್ರಭು ಇಟ್ನಳ್ಳಿ, ಗದಗ ವಕ್ತಾರ ಜಿ.ಸಿ. ರಶ್ಮಿ, ಪ್ರಶಾಂತ ರಾವವಣಗಿ ಹಾಗೂ ಗುರು ಪಾಟೀಲ ಇದ್ದರು.