ಹುಬ್ಬಳ್ಳಿ: ‘ಸಮಾಜದಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದು. ವೈದ್ಯೊ ನಾರಾಯಣ ಹರಿ ಎಂಬ ಮಾತಿನಂತೆ, ರೋಗಿಗಳ ಜೀವರಕ್ಷಕರಾಗಿರುವ ವೈದ್ಯರು ಒಂದು ರೀತಿಯಲ್ಲಿ ದೇವರಿಗೆ ಸಮಾನರಾಗಿದ್ದಾರೆ’ ಎಂದು ಆರೆಸ್ಸೆಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾರತದ ಮಣ್ಣಿನಲ್ಲಿ ಸೇವಾ ಮೌಲ್ಯದಿಂದಾಗಿ, ಇಡೀ ಜಗತ್ತು ಈಗ ಭಾರತದತ್ತ ನೋಡುವಂತಾಗಿದೆ’ ಎಂದರು.
ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ‘ಹುಬ್ಬಳ್ಳಿ- ಧಾರವಾಡದಲ್ಲಿ ಅತ್ಯುತ್ತಮವಾದ ಆರೋಗ್ಯ ಸೇವೆ ದೊರೆಯುತ್ತಿದೆ. ಚಿಕಿತ್ಸೆ ನೀಡುವುದರಲ್ಲಿ ಬಾಲಾಜಿ ಆಸ್ಪತ್ರೆ ಉತ್ತಮ ಹೆಸರು ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ಮುಖ್ಯಸ್ಥ ಡಾ. ಕ್ರಾಂತಿಕಿರಣ, ‘ಗುಣಮಟ್ಟದ ಆರೋಗ್ಯ ಸೇವೆ ನೀಡಿದ್ದಕ್ಕಾಗಿ ಆಸ್ಪತ್ರೆಗೆ ಎನ್ಎಬಿಎಚ್ ಮಾನ್ಯತೆ ದೊರೆತಿದೆ. ಮುಂದಿನ ದಿನಗಳಲ್ಲಿ ವಿದೇಶದ ರೋಗಿಗಳಿಗೂ ಚಿಕಿತ್ಸೆ ಕೊಡುವ ಚಿಂತನೆ ನಡೆದಿದ್ದು, ಆರೋಗ್ಯಕರ ಸಮಾಜಕ್ಕಾಗಿ ಆಸ್ಪತ್ರೆ ಸದಾ ಶ್ರಮಿಸುತ್ತದೆ’ ಎಂದು ಹೇಳಿದರು.
ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಕಿಮ್ಸ್ ಮಾಜಿ ನಿರ್ದೇಶಕ ಡಾ. ಬಿರಾದಾರ, ಡಾ. ಜಿ.ಎಚ್. ನರೇಗಲ್, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಕೇಂದ್ರ ಸರ್ಕಾರದ ಲೋಕಪಾಲ್ನ ಉಪ ಕಾರ್ಯದರ್ಶಿ ಅಭ್ಯುದಯ ಆನಂದ, ಶ್ರೀಧರ ನಾಡಿಗೇರ, ಸುರೇಶರಾವ್, ಗೋವಿಂದ ಜೋಶಿ, ಡಾ.ಮುಲ್ಕಿಪಾಟೀಲ ಇದ್ದರು.