ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಮಣಕವಾಡದ ಗುರು ಅನ್ನದಾನೀಶ್ವರ ದೇವಮಂದಿರ ಮಹಾಮಠದ ಸಿದ್ಧರಾಮ ದೇವರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಫೆ.16 ರಂದು ಬೆಳಿಗ್ಗೆ 10 ಗಂಟೆಗೆ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಹದಾಯಿ ಕಳಸಾ–ಬಂಡೂರಿ ಒಕ್ಕೂಟದ ಸಂಚಾಲಕ ಅಮೃತ್ ಇಜಾರಿ, ಸಮಾವೇಶವನ್ನು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಎಂ.ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮತ್ತಿರರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಕೃಷಿ ತಜ್ಞರಾದ ಎಸ್.ಎಸ್. ಪಾಟೀಲ, ಎಸ್.ಆರ್. ಪಾಟೀಲ, ಡಾ.ಸಿ.ಆರ್. ಪಾಟೀಲ, ರೈತ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ಕೃಷಿ ಸಾಧಕರಾದ ಕವಿತಾ ಮಿಶ್ರಾ, ಮಲ್ಲಣ್ಣ ನಾಗರಾಳ ಭಾಗವಹಿಸಲಿದ್ದಾರೆ.
ಮಣಕವಾಡದ ಶ್ರೀಗಳು ಸದಾ ಕಳಸಾ ಬಂಡೂರಿ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಮಠದಲ್ಲಿ ನಡೆಯುವ ರೈತ ಸಮಾವೇಶಕ್ಕೆ ಒಕ್ಕೂಟವೂ ಕೈಜೋಡಿಸಿದೆ. 8 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸುಭಾಷಚಂದ್ರಗೌಡ ಪಾಟೀಲ, ಶಿವಣ್ಣ ಹುಬ್ಬಳ್ಳಿ, ಬಸಪ್ಪ ಬೀರಣ್ಣವರ, ಸುರೇಶಗೌಡ ಪಾಟೀಲ, ಮಲ್ಲಯ್ಯ ಇದ್ದರು.