ಹುಬ್ಬಳ್ಳಿ: ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಪಕ್ಷದ ಕಾರ್ಯಕರ್ತರು ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಉತ್ತರಪ್ರದೇಶದ ನೇಹರ್ಸಿ ಟೋಲ್ ಗೇಟ್ ಹತ್ತಿರ ನಾಲ್ಕು ಜನ ದುಷ್ಕರ್ಮಿಗಳು ಓವೈಸಿ ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿ, ಹತ್ಯೆಗೆ ಸಂಚು ರೂಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅವರು ನಡೆಸುತ್ತಿರುವ ಪ್ರಚಾರದಿಂದ ಹತಾಶೆಗೊಂಡ ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಸೋಲಿನ ಭಯದಿಂದ ಗುಂಡಿನ ದಾಳಿಯ ಸಂಚು ರೂಪಿಸಿವೆ ಎಂದು ಕಾರ್ಯಕರ್ತರು ಆರೋಪಿಸಿದರು.
ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಓವೈಸಿ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಬೇಕು. ಉತ್ತರ ಪ್ರದೇಶದಲ್ಲಿ ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಹೊನ್ಯಾಳ, ವಿಜಯ ಗುಂಟ್ರಾಳ, ಸಫಾಕತ್ ಬಡಿಗೇರ, ದಾದಾಪೀರ ಬೇಟಗೇರಿ, ಮುನ್ನಾ ಕಿತ್ತೂರ, ಇರ್ಫಾನ್ ನಲತ್ತವಾಡ, ಜೈನುಲ್ ಮುಲ್ಲಾ, ಇಮ್ತಿಯಾಜ್ ಬಿಳಿಪಸಾರ, ರಘು ಬಳ್ಳಾರಿ, ರೋಹಿತ ಕನಮಕ್ಕಲ, ರಾಕೇಶ ಬಸವರಾಜ, ಹಮೀದ ಬೇಪಾರಿ ಭಾಗವಹಿಸಿದ್ದರು.