ಹುಬ್ಬಳ್ಳಿ: ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವದ ಮೂರನೇ ದಿನವಾದ ಬುಧವಾರ ನಗರದ ವಿವಿಧ ರಾಯರ ಮಠಗಳಲ್ಲಿ ಸಡಗರದಿಂದ ಸೀಮಿತ ಸಂಖ್ಯೆಯ ಭಕ್ತರ ನಡುವೆ ರಥೋತ್ಸವ ಜರುಗಿತು.
ಕೋವಿಡ್ ಕಾರಣದಿಂದಾಗಿ ದೇವರ ದರ್ಶನಕ್ಕಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಎಲ್ಲಿಯೂ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಇರಲಿಲ್ಲ. ಉತ್ತರರಾಧನೆಯಂದು ಪ್ರತಿ ವರ್ಷ ಕೋಲಾಟ, ಮಠದ ಮುಂಭಾಗದಲ್ಲಿ ಸಾಕಷ್ಟು ಭಕ್ತರ ನಡುವೆ ರಥೋತ್ಸವ ನಡೆಯುತ್ತಿತ್ತು. ಸೋಂಕಿನ ಭೀತಿ ಇರುವುದರಿಂದ ಈ ಬಾರಿ ರಥೋತ್ಸವ ಮಠದ ಪ್ರಾಂಗಣಕ್ಕಷ್ಟೇ ಸೀಮಿತವಾಯಿತು.
ಭವಾನಿನಗರದನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಭಕ್ತಾದಿಗಳ ರಾಯರ ಮಠ, ಪರಿಮಳ ಮಾರ್ಗದ ಮಠ, ಕುಬೇರಪುರಂ ಬಡಾವಣೆಯ ವೆಂಕಟೇಶ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನ, ತೊರವಿಗಲ್ಲಿ ಹೀಗೆ ಹಲವಾರು ದೇವಸ್ಥಾನಗಳಲ್ಲಿ ಬೃಂದಾವನಕ್ಕೆ ಹೂಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು.
ಬೃಂದಾವನಕ್ಕೆಪಾದಪೂಜೆ, ಪಂಚಾಮೃತ ಅಭಿಷೇಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭವಾನಿ ನಗರದ ಮಠದಲ್ಲಿ ಗುರುವಾರ ಸುಜ್ಞಾನೇಂದ್ರ ತೀರ್ಥರಆರಾಧನೆಜರುಗಲಿದೆ.
ಕುಬೇರಪುರಂ ಬಡಾವಣೆಯ ವೆಂಕಟೇಶ ದೇವಸ್ಥಾನ ಮತ್ತು ರಾಘವೇಂದ್ರ ಸ್ವಾಮಿಯ ಮಠ ಸೇರಿದಂತೆ ವಿವಿಧ ಮಠಗಳಲ್ಲಿ ಮಾಡಲಾಗಿದ್ದ ಅಲಂಕಾರ ಗಮನ ಸೆಳೆಯಿತು. ಭವಾನಿ ನಗರದ ಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು.
ರಾಯರ ಸ್ಮರಣೆ, ಮಂತ್ರ ಪಠಣ ನಡೆದವು. ಲಕ್ಷ್ಮೇಶ್ವರದ ಶಹನಾಯಿ ಕಲಾವಿದ ಕೃಷ್ಣ ಕ್ಷತ್ರೀಯ ಹಾಗೂ ಅವರ ಮಕ್ಕಳಾದ ರಾಘವೇಂದ್ರ ಹಾಗೂ ಶ್ರೀಹರಿ ಅವರ ಸಂಗೀತದ ಸೊಬಗು ಕಲಾಪ್ರೇಮಿಗಳ ಮನ ಗೆದ್ದಿತ್ತು. ಇವರು ಶಹನಾಯಿ ಊದುವಾಗ ಭಕ್ತರು ತಮ್ಮ ಮೊಬೈಲ್ಗಳಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು.