ಹುಬ್ಬಳ್ಳಿ: ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕೌಶಲ ಸ್ಪರ್ಧೆಯಲ್ಲಿ ಧಾರವಾಡದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ (ಜಿಟಿಟಿಸಿ) ಎರಡು ಚಿನ್ನ ಮತ್ತು ಒಂದು ಉತ್ಕೃಷ್ಟತಾ ಪದಕ ಲಭಿಸಿದೆ.
ಈ ವರ್ಷ ಚೀನಾದ ಶಾಂಘೈನಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ಕೌಶಲ ಸ್ಪರ್ಧೆಯ ಆಯ್ಕೆಗೆ ರಾಷ್ಟೀಯ ಮಟ್ಟದ ‘ಇಂಡಿಯಾ ಸ್ಕಿಲ್ಸ್’ ಸ್ಪರ್ಧೆ ನಡೆಯಿತು.
ಗಣೇಶ ಇರ್ಕಲ್ ‘ಪ್ಲಾಸ್ಟಿಕ್ ಡೈ ಎಂಜಿನಿಯರಿಂಗ್’ ವಿಭಾಗದಲ್ಲಿ ಚಿನ್ನ ಮತ್ತು ₹1 ಲಕ್ಷ ನಗದು ಬಹುಮಾನ ಪಡೆದಿದ್ದಾರೆ. ಫರಹಾನ್ ಪಾಂಥೋಜಿ ‘ಸಿಎನ್ಸಿ ಮಿಲ್ಲಿಂಗ್’ ವಿಭಾಗದಲ್ಲಿ ಚಿನ್ನ ಹಾಗೂ ₹1 ಲಕ್ಷ ನಗದು ಗಳಿಸಿದ್ದಾರೆ. ಹರೀಶ ಹಿಂಡಸಗೇರಿ ‘ಅಡೇಟಿವ್ ಮ್ಯಾನುಫ್ಯಾಕ್ಚರಿಂಗ್’ ಸ್ಪರ್ಧೆಯಲ್ಲಿ ಉತ್ಕೃಷ್ಟತಾ ಪದಕ ಜಯಿಸಿದ್ದಾರೆ.
ಸ್ಪರ್ಧೆಯಲ್ಲಿ ಕರ್ನಾಟಕದಿಂದ 35 ಸ್ಪರ್ಧಿಗಳು ಪಾಲ್ಗೊಂಡು, 24 ಪದಕಗಳನ್ನು ಜಯಿಸಿದ್ದಾರೆ. ನಮ್ಮ ಕೇಂದ್ರದ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂಥದ್ದು ಎಂದು ಪ್ರಾಚಾರ್ಯ ಶಿವಾನಂದ ಕುಂಬಾರ ಹರ್ಷ ವ್ಯಕ್ತಪಡಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಶಂಕರಗೌಡ ಮತ್ತು ಅಶೋಕ ವಾಲಿಕಾರ ವಿಶೇಷ ತರಬೇತಿ ನೀಡಿದ್ದರು.