ಅಣ್ಣಿಗೇರಿ: ಆದಿವಾಸಿ ಪಾರ್ದಿ, ಹರನಶಿಕಾರಿ ಹಾಗೂ ಗೊಲ್ಲ ಸಮುದಾಯಗಳಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಸಮುದಾಯದವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೀಡಿದ ಭರವಸೆ ಮೇರೆಗೆ ಭಾನುವಾರ ಅಂತ್ಯಗೊಳಿಸಲಾಯಿತು.
ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ‘ಆದಿವಾಸಿ ಪಾರ್ದಿ ಮತ್ತು ಇತರ ಜನಾಂಗದವರ ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ನಿಯಮಾವಳಿ ಪ್ರಕಾರ ಆದಷ್ಟು ಬೇಗ ಶಾಶ್ವತ ಸೂರು ಕಲ್ಪಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.
‘ಈ ಬಗ್ಗೆ ಚರ್ಚಿಸಲು ಶೀಘ್ರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗುವುದು. ಸಮಾಜದವರು ಸಭೆಯಲ್ಲಿ ಭಾಗವಹಿಸಬೇಕು‘ ಎಂದರು.