ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತು ಯುದ್ಧ ಟ್ಯಾಂಕ್‌!

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಮುಂದೆ ಇತ್ತೀಚೆಗೆ ಯುದ್ಧ ಟ್ಯಾಂಕ್‌ವೊಂದು ಬಂದು ಕುಳಿತಿದೆ; ಅದೂ ಇನ್ನೇನು ಗುಂಡಿ ಅದುಮಿದರೆ ಸಾಕು, ಮದ್ದುಗುಂಡು ಸಿಡಿಸಿಬಿಡುವುದೇನೋ ಎಂಬಂತಹ ಸನ್ನದ್ಧ ಸ್ಥಿತಿಯಲ್ಲಿ! ಹೌದುss, ನಾಲ್ಕು ಸಾವಿರ ಮೀಟರ್‌ ದೂರದವರೆಗೆ ಮದ್ದುಗುಂಡು ಹಾರಿಸಬಲ್ಲ, ಗಡಿಯಲ್ಲಷ್ಟೇ ಇರಬೇಕಾದ ಈ ಟ್ಯಾಂಕ್‌ಗೆ ಇಲ್ಲೇನು ಕೆಲಸ ಎಂಬ ಈ ಪ್ರಶ್ನೆ ಕಾಡಿತು. ಉತ್ತರ ಹುಡುಕುತ್ತಾ ಹೋದಾಗ ಹಲವು ರೋಚಕ ಸಂಗತಿಗಳು ಬೆಳಕಿಗೆ ಬಂದವು.

ರಾಜ್ಯದಲ್ಲಿರುವ ಎರಡು ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲಿ ಧಾರವಾಡದ್ದೇ ಮೊದಲನೆಯದು. ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಈ ಕೇಂದ್ರದ ಒಳ ಹೊಕ್ಕರೆ ವಿಜ್ಞಾನದ ಎಲ್ಲಾ ಬಗೆಯ ಪ್ರಯೋಗಗಳ ದರ್ಶನವಾಗಲಿದೆ. ಜತೆಗೆ ಹಲವು ಅಚ್ಚರಿಗಳನ್ನು ವೈಜ್ಞಾನಿಕ ತಳಹದಿಯಲ್ಲಿ ಕಲಿಯಲು ಸಹಕಾರಿಯಾಗುವಂತೆ ವಿವರಿಸಲಾಗಿದೆ. ಭಾರತೀಯ ವಿಜ್ಞಾನಿಗಳ ಪ್ರತಿಮೆಗಳು ಹಾಗೂ ಅವರ ಸಾಧನೆಗಳ ಫಲಕಗಳು ವಿದ್ಯಾರ್ಥಿಗಳಿಗೆ ಪಠ್ಯಕ್ಕಿಂತ ಹೆಚ್ಚಿನದನ್ನು ಹೇಳಿಕೊಡುತ್ತವೆ.

2012ರಲ್ಲಿ ಈ ಕೇಂದ್ರ ಸ್ಥಾಪನೆಗೊಂಡಾಗ ಧಾರವಾಡದವರೇ ಆದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಎಸ್‌.ಸಿ.ಸರದೇಶಪಾಂಡೆ, ‘20 ಲಕ್ಷಕ್ಕೂ ಅಧಿಕ ಸೈನಿಕರು ದೇಶದ ಗಡಿ ಕಾಯುತ್ತಿದ್ದಾರೆ. ಸೇನೆಗೆ ಸೇರಿದ ವಿಜ್ಞಾನ ಮಾದರಿಗಳನ್ನೂ ಇಲ್ಲಿಡಬೇಕು. ಯುದ್ಧ ಎಂದರೇನು, ಅದರ ಮಹತ್ವ ಏನು ಎಂಬುದು ನಮ್ಮ ಮಕ್ಕಳಿಗೂ ತಿಳಿಯಬೇಕು. ಬಳಕೆಯಲ್ಲಿಲ್ಲದ ಯುದ್ಧ ಟ್ಯಾಂಕರ್‌ ತಂದು ಇಲ್ಲಿ ಸ್ಥಾಪಿಸಿ, ಆ ಮೂಲಕ ಮಕ್ಕಳಿಗೆ ಹಾಗೂ ಯುವಕರಿಗೆ ದೇಶ ರಕ್ಷಣೆಯ ಮಹತ್ವ ತಿಳಿಯುವಂತೆ ಮಾಡಬೇಕು’ ಎಂದು ಪತ್ರ ಬರೆದರು.

ಈ ಪತ್ರ ಸುಮಾರು ವರ್ಷಗಳ ಕಾಲ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಅಲೆದಾಡಿತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ‘ನಾನು ಬರೆದ ಪತ್ರವನ್ನು ಓದಿದ ಅಂದಿನ ಹೆಚ್ಚುವರಿ ಜಿಲ್ಲಾಧಿಕಾರಿ, ಶಸ್ತ್ರಾಸ್ತ್ರಗಳ ಮಾರಾಟ ಮಾಡಲು ನನಗೆ ಅನುಮತಿ ನೀಡಬೇಕು ಎಂದು ಅರ್ಥೈಸಿಕೊಂಡು ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದರು. ಇದು ನಮ್ಮ ಆಡಳಿತ ಯಂತ್ರದ ವಾಸ್ತವ ಸ್ಥಿತಿ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸರದೇಶಪಾಂಡೆ.

‘ಕೇಂದ್ರದ ಅಂದಿನ ನಿರ್ದೇಶಕ ಡಾ. ಯು.ಎಸ್‌. ರಾಯ್ಕರ್‌, 2013ರಲ್ಲಿ ಮತ್ತೆ ರಾಜ್ಯ ಸರ್ಕಾರಕ್ಕೆ ಈ ಪತ್ರವನ್ನು ಕಳುಹಿಸಿಕೊಟ್ಟರು. ಶಾಸಕ ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿಯವರ ಮೂಲಕ ರಕ್ಷಣಾ ಸಚಿವರಿಗೆ ಪ್ರಸ್ತಾವ ಕಳುಹಿಸುವ ವ್ಯವಸ್ಥೆ ಮಾಡಿದರು. ಸಂಸದ ಪ್ರಹ್ಲಾದ ಜೋಶಿ ಕೇಂದ್ರ ಸರ್ಕಾರದ ಪ್ರತಿನಿಧಿಗಳ ಜತೆ ಮಾತನಾಡುವ ಭರವಸೆ ನೀಡಿದರು. ಈ ನಡುವೆ ಎರಡು ಸರ್ಕಾರಗಳು, ಇಬ್ಬರು ಜಿಲ್ಲಾ ಮಂತ್ರಿಗಳು, ಇಬ್ಬರು ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಬದಲಾದರು. ಮತ್ತೊಂದು ಪತ್ರವನ್ನು ಪ್ರಧಾನಿ ಕಚೇರಿ ಹಾಗೂ ಭಾರತೀಯ ಸೇನೆಗೆ ಬರೆಯಲಾಯಿತು’ ಎಂದು ಅವರು ಸ್ಮರಿಸುತ್ತಾರೆ.

ಸತತ ಐದು ವರ್ಷಗಳ ಪ್ರಯತ್ನದ ಫಲವಾಗಿ ಎ.ಟಿ–55 ಟ್ಯಾಂಕ್‌ ಧಾರವಾಡಕ್ಕೆ ಬಂದಿಳಿದಿದೆ. ಬೆಳಗಾವಿ ವಿಭಾಗದ ಸೇನಾ ಮುಖ್ಯಸ್ಥರು ಇಲ್ಲಿಗೆ ಬಂದು, ಟ್ಯಾಂಕ್‌ ಇಡುವ ಸ್ಥಳ ಹೇಗಿರಬೇಕು, ಅದನ್ನು ಹೇಗಿಡಬೇಕು ಎಂದು ತೋರಿಸಿಕೊಟ್ಟಿದ್ದು, ಅದರಂತೆಯೇ ವಿಜ್ಞಾನ ಕೇಂದ್ರದ ಮುಂದೆ ಅದನ್ನು ಸ್ಥಾಪನೆ ಮಾಡಲಾಗಿದೆ.

ಹಲವು ಸೆನ್ಸರ್‌ಗಳನ್ನು ಈ ಟ್ಯಾಂಕ್‌ ಹೊಂದಿದೆ. ಈಗ ಅದು ತನ್ನ ಕಾರ್ಯವನ್ನು ನಿಲ್ಲಿಸಿದೆ. ಆದರೆ, ಅದರ ಬಳಕೆಯನ್ನು ಅರ್ಥ ಮಾಡಿಕೊಂಡಲ್ಲಿ ಯುದ್ಧ ಸಾಧನಗಳ ಕುರಿತು ವಿಶೇಷ ಆಸಕ್ತಿ ಬೆಳೆಯಲಿದೆ. ಆ ಮೂಲಕವೇ ನಮ್ಮ ಯುವಸಮುದಾಯದಲ್ಲಿ ದೇಶಪ್ರೀತಿ ಮೂಡಿಸಬೇಕಿದೆ ಎಂಬ ಆಶಯ ಈ ಟ್ಯಾಂಕ್‌ಅನ್ನು ಇಲ್ಲಿಗೆ ತರಲು ಕಾರಣವಾದ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಅವರದು.

ಸೇನೆಯ ಒಂದು ಘಟಕದಿಂದ ಮತ್ತೊಂದಕ್ಕೆ ಇಂತಹ ಬಳಕೆಯಲ್ಲಿಲ್ಲದ ಟ್ಯಾಂಕ್ ನೀಡಲು ಅವಕಾಶವಿತ್ತು. ಆದರೆ, ಸಾರ್ವಜನಿಕ ಸಂಸ್ಥೆಗೆ ನೀಡಲು ಅವಕಾಶ ಇರಲಿಲ್ಲ. ಕಾನೂನಿನ ಈ ತೊಡಕಿಗೆ ಪರಿಹಾರ ಕಂಡುಕೊಂಡಿರುವ ರಕ್ಷಣಾ ಇಲಾಖೆ, ಅಗತ್ಯ ತಿದ್ದುಪಡಿ ಮಾಡಿ, ಈ ಟ್ಯಾಂಕ್‌ಅನ್ನು ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಉಚಿತವಾಗಿ ಒದಗಿಸಿದೆ.

‘ನಮ್ಮ ಜತೆಯಲ್ಲೇ ದೇಶದ ಇತರ ಸಂಘ ಸಂಸ್ಥೆಗಳಿಂದಲೂ ರಕ್ಷಣಾ ಇಲಾಖೆಗೆ ಕೋರಿಕೆಯ ಪತ್ರಗಳು ಸಲ್ಲಿಕೆಯಾಗಿದ್ದವು. ಬಳಕೆಯಲ್ಲಿಲ್ಲದ ಟ್ಯಾಂಕ್‌ಗಳ ವಿಲೇವಾರಿ ಕುರಿತ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಇದರ ಫಲವಾಗಿ ನಮ್ಮ ಕೇಂದ್ರ ಹಾಗೂ ಇತರ ಮೂರು ಪ್ರಾದೇಶಿಕ ವಿಜ್ಞಾನ ಕೇಂದ್ರಗಳಿಗೆ ಸಾರಿಗೆ ವೆಚ್ಚ ಹೊರತುಪಡಿಸಿ ಉಚಿತವಾಗಿ ಟ್ಯಾಂಕ್‌ಗಳನ್ನು ನೀಡಲಾಗಿದೆ’ ಎಂದು ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ಎಂ.ಗುಡಸಿ ಹೇಳುತ್ತಾರೆ.

ಎ.ಟಿ–55 ಯುದ್ಧ ಟ್ಯಾಂಕ್‌ ರಷ್ಯಾ ನಿರ್ಮಿತವಾದುದು. 1983ರಲ್ಲಿ ಭಾರತೀಯ ಸೇನೆಯನ್ನು ಸೇರಿದ ಈ ಟ್ಯಾಂಕ್‌, 2010ರಲ್ಲಿ ನಿವೃತ್ತಿ ಹೊಂದಿತು. ‘ಅಜಯ್‌’ ಎಂಬ ನಾಮಕರಣ ಹೊಂದಿದ ಇದರ ಒಟ್ಟು ತೂಕ 36 ಟನ್‌. ಧಾರವಾಡಕ್ಕೆ ಬಂದಿಳಿದ ಈ ಟ್ಯಾಂಕರ್‌ ಅನ್ನು 80 ಟನ್ ಕ್ರೇನ್ ಸಹಾಯದಿಂದ ಸಿಮೆಂಟ್‌ ಕಟ್ಟೆಯ ಮೇಲೆ ಇರಿಸಲಾಗಿದೆ.

ಹತ್ತು ಖಾಸಗಿ ಸಂಸ್ಥೆಗಳು, ರಕ್ಷಣಾ ಇಲಾಖೆಗೆ ₹1.97 ಲಕ್ಷ ಕೊಟ್ಟು ತಮ್ಮದೇ ಖರ್ಚಿನಲ್ಲಿ ಕೊಂಡೊಯ್ಯುವ ಒಪ್ಪಂದ ಮಾಡಿಕೊಂಡಿವೆ. ಬಳಕೆಯಲ್ಲಿ ಇಲ್ಲದ ಟ್ಯಾಂಕ್‌ಗಳನ್ನು ನೀಡಿರುವ ರಕ್ಷಣಾ ಇಲಾಖೆಯ ಪಟ್ಟಿಯಲ್ಲಿ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಹೆಸರು ಮೊದಲನೆಯದಾಗಿದೆ. ಆ ಮೂಲಕ ದೇಶದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಲ್ಲಿ ಯುದ್ಧ ಟ್ಯಾಂಕ್‌ ಪಡೆದ ಮೊದಲ ಕೇಂದ್ರ ಇದಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲೇ ಸ್ಥಾಪಿಸಲಾಗಿರುವ ಈ ಟ್ಯಾಂಕ್‌ ಒಳಗಿಳಿದು ಮಕ್ಕಳು ಅದರೊಳಗಿನ ಬ್ರಹ್ಮಾಂಡವನ್ನು ಅರಿಯುವ ಪ್ರಯತ್ನ ನಡೆಸಿದ್ದಾರೆ.

**

ಸೈನಿಕರಿಗೆ ಮಿಡಿಯುವ ಮನ

‘ಸಶ್ರೀಕುಮಾಂವು’ ಎಂಬ ತಮ್ಮ ಹಿಂದಿನ ಬೆಟಾಲಿಯನ್‌ ಹೆಸರಿನಲ್ಲಿ ಒಂದು ಸಂಸ್ಥೆ ಸ್ಥಾಪಿಸಿಕೊಂಡಿರುವ ಎಸ್‌.ಸಿ.ಸರದೇಶಪಾಂಡೆ ಅವರು ಪ್ರತಿ ವರ್ಷ ವಿಜಯ ದಶಮಿಯಂದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ಗೌರವ ನಮನ, ಸೇನೆ ಹಾಗೂ ದೇಶದ ರಕ್ಷಣೆ ಕುರಿತು ಪ್ರತಿ ತಿಂಗಳು ತಜ್ಞರಿಂದ ಉಪನ್ಯಾಸ, ಸೇವಾ ಪದಕ ಪಡೆದ ನಿವೃತ್ತ ಅಥವಾ ಮರಣಹೊಂದಿದ ಸೇನಾ ಕುಟುಂಬಗಳಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.

(ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್‌.ಸಿ.ಸರದೇಶಪಾಂಡೆ)

ಸೇನೆ ಕುರಿತ ವಿಷಯವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹಲವು ಬಾರಿ ಮನವಿಯನ್ನೂ ಅವರು ಮಾಡಿಕೊಂಡಿದ್ದಾರೆ.

ಗುಪ್ತ ಸಂಕೇತ

ಮೊದಲನೇ ಮಹಾಯುದ್ಧದಲ್ಲಿ ಪರಿಚಯಿಸಲಾದ ಈ ಸಶಸ್ತ್ರ ಯುದ್ಧ ವಾಹನ ಹಲವು ಯುದ್ಧ ಸಾಧನಗಳನ್ನು ತನ್ನೊಳಗೆ ಹೊಂದಿದೆ. ಇದು ಕಾಲಕಾಲಕ್ಕೆ ಪರಿಷ್ಕರಣೆಗೊಳ್ಳುತ್ತಲೇ ಬಂದಿದೆ. ಎ.ಟಿ–55 ಅದರ ಮುಂದುವರಿದ ಮಾದರಿಗಳು ಈಗ ಪರಿಚಯಗೊಳ್ಳುತ್ತಲೇ ಇವೆ.

ಮೊದಲ ಮಹಾಯುದ್ಧದಲ್ಲಿ ಇದರ ಹೆಸರನ್ನು ಗುಪ್ತವಾಗಿಡಲು ವಿನ್ಸೆಂಟ್‌ ಚರ್ಚಿಲ್‌ ಇದನ್ನು ‘ಟ್ಯಾಂಕ್‌’ ಎಂಬ ಗುಪ್ತ ಸಂಕೇತದಲ್ಲಿ ಕರೆದರು. ಅದು ಟ್ಯಾಂಕ್‌ ಆಗಿಯೇ ಉಳಿಯಿತು. ಆದರೆ ಇಂದು ಟ್ಯಾಂಕರ್‌ ಎಂದು ಅಪಭ್ರಂಶದಿಂದ ಕರೆಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸರದೇಶಪಾಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT