ಕಲಘಟಗಿ: ತಾಲ್ಲೂಕಿನಾದ್ಯಂತ ಭಾರಿ ಗಾಳಿ, ಸಿಡಿಲು ಸಹಿತ ಅಲ್ಲಲಿ ಆಲಿಕಲ್ಲು ಮಳೆ ಸುರಿದು ಗಿಡ ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ತಾಲ್ಲೂಕಿನ ತುಮರಿಕೊಪ್ಪ ಗ್ರಾಮದ ರಸ್ತೆಯ ಪಕ್ಕದ ಮರ ವಿದ್ಯುತ್ ತಂತಿ ಮೇಲೆ ಬಿದ್ದು ಕಂಬ ಮುರಿದು ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಹುಲ್ಲಂಬಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಇಷ್ಟು ದಿನ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಈಗ ವರ್ಷದ ಮೊದಲ ಮಳೆ ಸುರಿದು ಎಲ್ಲ ಕಡೆ ತಂಪಾದ ವಾತಾವರಣ ಉಂಟಾಗಿದೆ.
ಹೋಳಿ ಹುಣ್ಣಿಮೆ ಅಂಗವಾಗಿ ಕಾಮದಹನ ಮಾಡಿದ ಮೇಲೆ ಮಳೆಯಾಗಿದ್ದರಿಂದ ಇದು ಕಾಮಣ್ಣನ ಕಣ್ಣೀರು ಎಂದು ಕೂಡಾ ಕರೆಯುತ್ತಾರೆ.