ಹುಬ್ಬಳ್ಳಿ/ ಹರಪನಹಳ್ಳಿ:ಗದಗ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಬುಧವಾರ ಸಂಜೆ ಗುಡುಗು, ಸಿಡಿಲಿನ ಮಳೆ ಬಿದ್ದಿದೆ.ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕುದೆರೆಡವು ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಡಿವಾಳರ ಲಿಂಗರಾಜ(26) ಮೃತಪಟ್ಟಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಮೈದೂರು ಗ್ರಾಮದ ಜಮೀನೊಂದರ ಮರದ ಕೆಳಗೆ ಬುಧವಾರ ನಿಂತಿದ್ದ ಕುರಿಗಾಹಿ ಬಸವರಾಜ್ (23) ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಜೊತೆಯಲ್ಲಿದ್ದ ಅವರ ತಂದೆ ದೇವೇಂದ್ರಪ್ಪ, ಸಹೋದರ ವೀರೇಶ್ ಸೇರಿ ನಾಲ್ಕು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಡಿಲು ಬಡಿಯುತ್ತಿದ್ದಂತೆಯೇ ಜೊತೆಯಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಬಸವರಾಜ್ ಕೊನೆ ಉಸಿರೆಳೆದಿದ್ದಾರೆ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.