ಹುಬ್ಬಳ್ಳಿ: ಹಿಂದಿ ಭಾಷೆ ಕುರಿತಾಗಿ ಗೃಹಸಚಿವ ಅಮಿತ್ ಶಾ ಅವರು ತಮ್ಮ ಅಭಿಪ್ರಾಯವನ್ನಷ್ಟೇ ವ್ಯಕ್ತಪಡಿಸಿದ್ದಾರೆ. ಯಾರ ಮೇಲೂ ಹಿಂದಿಯನ್ನು ಹೇರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಒಂದು ದೇಶ, ಒಂದು ಭಾಷೆ; ಭಾರತೀಯರೆಲ್ಲರೂ ಒಂದೇ ಎಂದು ಅವರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಪರ, ವಿರೋಧ ಅಭಿಪ್ರಾಯಗಳಿದ್ದರೆ ರಚನಾತ್ಮಕ ಚರ್ಚೆಯಾಗಲಿ. ಅದನ್ನು ಬಿಟ್ಟು ಪ್ರತಿಪಕ್ಷಗಳು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದರು.
ಇದನ್ನೂ ಓದಿ:ಹಿಂದಿ ದಿವಸ್ ಎಂದರೇನು?ಏಕೆ ಆಚರಿಸುತ್ತಾರೆ?
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವ ರಾಜ್ಯದ ಮೇಲೂ ಇಂಥದ್ದೇ ಭಾಷೆ ಬಳಸಬೇಕು ಎಂದು ಒತ್ತಡ ಹೇರಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಲು ಬೇರೆ ಯಾವ ವಿಷಯಗಳೂ ಇಲ್ಲದ ಕಾರಣ ಪ್ರತಿಪಕ್ಷಗಳು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ’ ಎಂದು ದೂರಿದರು.
ಮಹದಾಯಿ ವಿವಾದವನ್ನು ಕೋರ್ಟ್ನಲ್ಲಿಯೇ ಪರಿಹರಿಸಿಕೊಳ್ಳಬೇಕು ಎಂದು ಗೋವಾ ಮುಖ್ಯಮಂತ್ರಿ ನೀಡಿದ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಮನೋಹರ ಪರ್ರೀಕರ್ ಗೋವಾ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಅಧಿಕಾರದಲ್ಲಿ ಕಾಂಗ್ರೆಸ್ ಈ ವಿವಾದವನ್ನು ಪರಿಹರಿಸಲು ಮನಸ್ಸು ಮಾಡಲಿಲ್ಲ. ಇದಕ್ಕೆ ಕಾಂಗ್ರೆಸ್ನವರು ಯಾವಾಗಲೂ ಅಡ್ಡಗಾಲು ಹಾಕುತ್ತಿರುತ್ತಾರೆ’ ಎಂದು ಆರೋಪಿಸಿದರು.
ಇದನ್ನೂ ಓದಿ:ನಮ್ಮ ನೆಲದಲ್ಲಿ ನಾವೇಕೆ ಇಂಥ ಪಾಡು ಅನುಭವಿಸಬೇಕು
‘ವಿವಾದ ಇತ್ಯರ್ಥ್ಯಕ್ಕೆ ಕೇಂದ್ರದ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದೇವೆ. ಮಹದಾಯಿ ವಿವಾದವನ್ನು ಪರಿಹರಿಸಲು ಎಲ್ಲ ಪಕ್ಷದವರು ಒಂದಾಗಬೇಕು; ಇಲ್ಲವಾದರೆ ಇದು ವಿವಾದವಾಗಿಯೇ ಉಳಿದುಕೊಳ್ಳುತ್ತದೆ’ ಎಂದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.