ಹುಬ್ಬಳ್ಳಿ: ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಹೊರಹರಿವು ಭಾನುವಾರ ಬೆಳಿಗ್ಗೆಯಿಂದ 45 ಸಾವಿರ ಕ್ಯುಸೆಕ್ಗೆ ಹೆಚ್ಚಿಸಲಾಗಿದೆ. ಜಲಾಶಯ ಭರ್ತಿಗೆ 2 ಮೀಟರ್ ಬಾಕಿ ಇದೆ.
ಜಲಾಶಯದ ಮುಂಭಾಗದ ನದಿ ತೀರದ ಗ್ರಾಮಗಳಿಗೆ ಆಯಾ ತಾಲ್ಲೂಕು ಆಡಳಿತದ ಮೂಲಕ ನದಿ ತೀರಕ್ಕೆ ಹೋಗದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಭಾನುವಾರ 69,868 ಕ್ಯುಸೆಕ್ (6 ಟಿಎಂಸಿ ಅಡಿ) ನೀರು ಹರಿದು ಬಂದಿದೆ.
ಕೆಪಿಸಿಎಲ್ನ ಎಲ್ಲ ಘಟಕಗಳೂ ಕಾರ್ಯಾರಂಭ ಮಾಡಿದ್ದು, 255 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೃಷ್ಣಾ ನದಿಯ ಹರಿವು ಇಳಿಕೆಯಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನ ಏಳು ಬ್ಯಾರೇಜ್ಗಳು ಸಂಚಾರಕ್ಕೆ ಮುಕ್ತವಾಗಿವೆ. ರಾಜಾಪುರ ಬ್ಯಾರೇಜ್ನಿಂದ 44,125 ಕ್ಯುಸೆಕ್ ಮತ್ತು ದೂಧ್ಗಂಗಾ ನದಿಯಿಂದ 10,912 ಕ್ಯುಸೆಕ್ ಸೇರಿ ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ55,037 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ ಒಳಹರಿವು ಐದು ದಿನಗಳ ನಂತರ ತಗ್ಗಿದೆ.ಧಾರವಾಡ, ಗದಗ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ.
ಸಾಧಾರಣ ಮಳೆ:ಕೊಡಗು ಜಿಲ್ಲೆಯ ಮಡಿಕೇರಿ, ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿಯಿತು.ಕಲಬುರ್ಗಿ ನಗರದಲ್ಲಿ ಉತ್ತಮ ಮಳೆಯಾಯಿತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.