ಹುಬ್ಬಳ್ಳಿ: ಕೊರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯದಾದ್ಯಂತ ಒಂದು ವಾರ ಮಾಲ್, ಥಿಯೇಟರ್ಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿರುವುದರಿಂದ ನಗರದಲ್ಲಿ ಮಾಲ್ ಗಳು, ಚಿತ್ರಮಂದಿರ, ಈಜುಗೊಳ ಸ್ತಬ್ಧಗೊಂಡಿವೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ತೀವ್ರ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ನಗರದಲ್ಲಿ ಶಾಲಾ, ಕಾಲೇಜುಗಳ ಬಂದ್ ಆಗಿವೆ. ವಾರ್ಷಿಕ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಇಂದು ತಮ್ಮ ಸಂಘಟನೆಯಿಂದ ಆಯೋಜಿಸಿದ್ದ ವಸಂತಗೀತ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ವಾಯವ್ಯ ಸಾರಿಗೆ ಬಸ್ ಸಂಚಾರ ಎಂದಿನಂತಿದೆ. ನಗರದಲ್ಲಿ ಜನಜೀವನ ಸಹಜವಾಗಿದ್ದರೂ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚಾರ ವಿರಳವಾಗಿದೆ.
ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ತಪಾಸಣಾ ಕೇಂದ್ರ ಮತ್ತು ಚಿಕಿತ್ಸೆಗೆ ಪ್ರತ್ಯೇಕ ಕೊಠಡಿ ಗಲನ್ನು ತೆರೆಯಲಾಗಿದೆ. ಇದುವರೆಗೆ ಯಾರಲ್ಲೂ ಕೊರೊನಾ ಸೋಂಕಾಗಲಿ, ಶಂಕಿತರಾಗಲಿ ಕಂಡುಬಂದಿಲ್ಲ.