ಧಾರವಾಡ: ‘ಯಾವುದೇ ಆಚರಣೆಯ ಹಿಂದಿನ ವೈಜ್ಞಾನಿಕ ಅಂಶಗಳನ್ನು ಅರಿತಾಗ ಮಾತ್ರ ಅರ್ಥಪೂರ್ಣ ಆಚರಣೆಯಾಗುತ್ತದೆ’ ಎಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ನಿಲಯ ಪಾಲಕ ಮಹಾದೇವ ಬೆಟಗೇರಿ ಹೇಳಿದರು.
ವಿದ್ಯಾಕೇಂದ್ರದಲ್ಲಿ ಶನಿವಾರ ಆಯೋಜಿಸಿದ ರಥಸಪ್ತಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸೂರ್ಯ ಪ್ರತ್ಯಕ್ಷ ದೇವರು. ಸೌರ ಮಂಡಳದ ರಾಜ. ಸೂರ್ಯನಿಲ್ಲದೆ ಜೀವರಾಶಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಉತ್ತಮ ಆರೋಗ್ಯ, ಐಶ್ವರ್ಯ, ಸಮೃದ್ಧಿಗಾಗಿ ಸೂರ್ಯನಿಗೆ ನಿತ್ಯವೂ ಪ್ರಾರ್ಥನೆ ಸಲ್ಲಿಸುತ್ತೇವೆ’ ಎಂದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಡಾ. ಅನಿತಾ ರೈ, ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ ಇದ್ದರು. ಯೋಗ ಗುರು ಆತ್ಮಾನಂದ ಗಡಾದ ಹಾಗೂ ನರಸಿಂಹ ನಾಯಕ ಅವರು ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಿಕೊಟ್ಟರು. ಚಿನ್ಮಯ ರೇಶ್ಮಿ ಹಾಡಿದರು.
ಯೋಗಮಯಂ ಯೋಗ ಸಾಧನ ಕೇಂದ್ರ: ಸಂವೇದನಾ ಸೇವಾ ಸಂಸ್ಥೆಯ ಸಹಯೋಗದಲ್ಲಿ ಯೋಗಮಯಂ ಯೋಗ ಸಾಧನ ಕೇಂದ್ರವು ರಥಸಪ್ತಮಿ ಕಾರ್ಯಕ್ರಮವನ್ನು ಶನಿವಾರ ಬೆಳಿಗ್ಗೆ ನಡೆಸಿತು.
ದುರ್ಗಾದೇವಿ ಗುಡಿ ಬಳಿಯ ಮೃತ್ಯುಂಜಯ ಕಾಲೇಜು ಆವರಣದಲ್ಲಿ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ಚಾಲನೆ ನೀಡಿದರು. ಎಸ್ಬಿಐ ಎಜಿಎಂ ಕೃಷ್ಣಪ್ಪ ಲಕ್ಷ್ಮಣ ನಾಯಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಯೋಗ ಗುರು ಲಕ್ಷ್ಮಣ ಲಕ್ಷ್ಮಣ ಜಿ. ಬೋಡಕೆ ಅವರ ಮಾರ್ಗದರ್ಶನದಲ್ಲಿ ಪಾಲ್ಗೊಂಡವರು ಸಾಮೂಹಿಕವಾಗಿ 108 ಸೂರ್ಯನಮಸ್ಕಾರ ಮಾಡಿದರು. ಶ್ವೇತ ವಸ್ತ್ರಧಾರಿಗಳಾದ ಯೋಗಪಟುಗಳು ಸೂರ್ಯನಮಸ್ಕಾರದ ಮೂಲಕ ಭಾಸ್ಕರನಿಗೆ ವಂದಿಸಿದರು.
ಪೊಲೀಸ್ ಮಕ್ಕಳ ವಸತಿ ಶಾಲೆ: ರಥಸಪ್ತಮಿ ಪ್ರಯುಕ್ತ ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಸೂರ್ಯನಮಸ್ಕಾರ ಆಯೋಜಿಸಲಾಗಿತ್ತು. ಪತಂಜಲಿ ಯೋಗ ಸಮಿತಿಯ ಯೋಗಚಾರ್ಯ ಭವರಲಾಲ್ ಆರ್ಯ ಅವರು ಪ್ರಾತ್ಯಕ್ಷಿಕೆಯ ಮೂಲಕ ಸೂರ್ಯನಮಸ್ಕಾರದ ಮಹತ್ವ ತಿಳಿಸಿಕೊಟ್ಟರು.
‘ವಿದ್ಯಾರ್ಥಿಗಳು ಪ್ರತಿದಿನ ಸೂರ್ಯ ನಮಸ್ಕಾರ ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ವೈ.ಪಿ.ಕಲ್ಲನಗೌಡರ ವಹಿಸಿದ್ದರು. ಪತಂಜಲಿ ಯೋಗ ಸಮಿತಿಯ ರಮೇಶ್ ಸುಲಾಖೆ, ಎಂ.ಡಿ.ಪಾಟೀಲ, ಡಾ. ಎ.ಸಿ.ಅಲ್ಲಯ್ಯನವರಮಠ, ಡಾ. ಎಸ್.ಒ.ಬಿರಾದಾರ, ಜಯಶ್ರೀ ದನ್ನಪ್ಪನವರ, ಡಾ. ಪ್ರಕಾಶ ಪವಾಡಶೆಟ್ಟಿ ಇದ್ದರು.