ಹುಬ್ಬಳ್ಳಿ: ನಗರದ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಕಾಲಮಿತಿಯಲ್ಲಿ ಮುಗಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರವಿಕುಮಾರ ಸುರಪುರ ನಿರ್ದೇಶನ ನೀಡಿದರು.
ಸ್ಮಾರ್ಟ್ಸಿಟಿ ಸಂಸ್ಥೆಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಭಾನುವಾರ ಅವರು ಪರಿಶೀಲಿಸಿದರು. ಪ್ರಗತಿಯಲ್ಲಿರುವ ವಾಣಿವಿಲಾಸ ಜಿ ಪ್ಲಸ್ ವಸತಿ ಯೋಜನೆ, ಗ್ರೀನ್ ಮೊಬೈಲಿಟಿ ಕಾರಿಡಾರ್, ಎಂ.ಜಿ . ಪಾರ್ಕ್, ಪಜಲ್ ಪಾರ್ಕಿಂಗ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು.
ಉಣಕಲ್ ಕೆರೆಯ ಗ್ರೀನ್ ಮೊಬೈಲಿಟಿ ಕಾರಿಡಾರ್ನಲ್ಲಿ ಕೊಳಚೆ ನೀರು ಸೇರದಂತೆ ಕ್ರಮವಹಿಸಬೇಕು. ಎರಡನೇ ಹಂತದ ಗ್ರೀನ್ ಮೊಬೈಲಿಟಿ ಕಾರಿಡಾರ್ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ಕಾಮಗಾರಿ ಪ್ರಾರಂಭಿಸಬೇಕು. ಈಗಾಗಲೇ ಮುಕ್ತಾಯವಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಜಂಟಿ ವ್ಯವಸ್ಥಾಪಕ ನಿರ್ದೇಶಕ ಎ.ಆರ್.ದೇಸಾಯಿ, ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ)ಬಿ.ಎಸ್.ಚಂದ್ರಶೇಖರ, ಪ್ರಧಾನ ವ್ಯವಸ್ಥಾಪಕ ಎಂ.ನಾರಾಯಣ ಇದ್ದರು.