ಹುಬ್ಬಳ್ಳಿ: ಪಂದ್ಯದ ಆರಂಭದಿಂದಲೇ ಚುರುಕಿನ ಪ್ರದರ್ಶನ ನೀಡಿದ ಗೋಕಾಕ್ ತಾಲ್ಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮದೇವಿ ತಂಡ, ರಾಜ್ಯ ಮಟ್ಟದ ಹೊನಲು ಆಹ್ವಾನಿತ ಕಬಡ್ಡಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.
ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಹಾಗೂ ಎ–ಒನ್ ಸ್ಪೋರ್ಟ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಶಾಂತಿನಗರದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಉದಗಟ್ಟಿಯ ತಂಡ 27–7 ಅಂಕಗಳಿಂದ ಬೆಂಗಳೂರಿನ ನ್ಯಾಷನಲ್ಸ್ ಎದುರು ಸುಲಭ ಗೆಲುವು ಸಾಧಿಸಿತು.
ಮೊದಲರ್ಧದಲ್ಲಿ ಉದಗಟ್ಟಿ ತಂಡ 20–5ರ ಅಂಕಗಳಿಂದ ಮುನ್ನಡೆ ಹೊಂದಿ ಎದುರಾಳಿ ತಂಡದ ಮೇಲೆ ಹಿಡಿತ ಹೊಂದಿತ್ತು. ಚಾಂಪಿಯನ್ ತಂಡಕ್ಕೆ ₹ 30 ಸಾವಿರ ಮತ್ತು ರನ್ನರ್ಸ್ ಅಪ್ ಸ್ಥಾನ ಪಡೆದ ತಂಡಕ್ಕೆ ₹ 20 ಸಾವಿರ ಬಹುಮಾನ ಲಭಿಸಿತು.
ಎಸ್. ಚೇತನ್ ಗಾಯಗೊಂಡ ಕಾರಣ ಪಂದ್ಯ ಪೂರ್ಣಗೊಳ್ಳುವ ಮೊದಲೇ ಅಂಕಣದಿಂದ ಹೊರಗುಳಿಯಬೇಕಾಯಿತು. ಪ್ರಥಮ ಚಿಕಿತ್ಸೆಯೂ ಇಲ್ಲದ ಕಾರಣ ಅವರು ಪರದಾಡಿದರು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಉದಗಟ್ಟಿ ತಂಡ 26–7ರಲ್ಲಿ ರವೀಂದ್ರ ಹುಬ್ಬಳ್ಳಿ ತಂಡದ ಮೇಲೂ, ಬೆಂಗಳೂರಿನ ತಂಡ 36–25ರಲ್ಲಿ ಕೊಡಗಿನ ಜ್ಞಾನ ಭಾರತಿ ವಿರುದ್ಧವೂ ಗೆಲುವು ಸಾಧಿಸಿದ್ದವು.