ನವಲಗುಂದ: ಮಹದಾಯಿ– ಕಳಸಾ ಬಂಡೂರಿ ನದಿ ಜೋಡಣೆ ಪ್ರಾರಂಭಿಸುವಂತೆ ಪಕ್ಷಾತೀತ ಹೋರಾಟ ಸಮಿತಿ ತಹಶೀಲ್ದಾರ್ ನವೀನ ಹುಲ್ಲೂರ ಅವರ ಮುಖಾಂತರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದರು.
ಸಮಿತಿ ಅಧ್ಯಕ್ಷ ಸಿದ್ದಪ್ಪ ಮುಪೈನವರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ಅಂತರಾಜ್ಯ ನದಿ ಜೋಡಣೆ ಮಾಡುತ್ತೇವೆಂದು ರೈತ ಸಮುದಾಯಕ್ಕೆ ಭರವಸೆ ನೀಡಿ ಹತ್ತು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾದಾಯಿ ಯೋಜನೆಗೆ ₹ 1 ಸಾವಿರ ಕೋಟಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದು, ರೈತ ಕುಲಕ್ಕೆ ಸಂತಸ ನೀಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಿ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.
ಕಾಮಗಾರಿ ಆರಂಭಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು, ಎಲ್ಲ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸುಭಾಸ್ ಚಂದ್ರಗೌಡ ಪಾಟೀಲ್, ಮಲ್ಲೇಶ್ ಉಪ್ಪಾರ, ಬಸನಗೌಡ ಫಕ್ಕೀರಗೌಡ, ಶಿವಪ್ಪ ಸಂಗಳದ, ಗೋವಿಂದರಡ್ಡಿ ಮೊರಬದ ಉಪಸ್ಥಿತರಿದ್ದರು.
ಪಟ್ಟಣ ರೈತ ಭವನದಲ್ಲಿ ಪಕ್ಷಾತೀತ ಹೋರಾಟ ಸಮಿತಿ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹ 2006ನೇ ದಿನಕ್ಕೆ ಕಾಲಿಟ್ಟಿದೆ.