ಇಲ್ಲಿನ ಕಿಮ್ಸ್ ಸಂಸ್ಥೆಯ ಮುಂಭಾಗದಲ್ಲಿ ಗುರುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೂ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರು ಕೂಡಲೇ ಪ್ರಕರಣದಲ್ಲಿ ಕಿಮ್ಸ್ ನಿರ್ದೇಶಕರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗುತ್ತಿಗೆ ಕಾರ್ಮಿಕ ಮಹಿಳೆ ಮಂಜುಳಾ ಚವ್ಹಾಣ, ‘ಬಯೊಮೆಟ್ರಿಕ್ ಗುರುತು ನೀಡುವ ಸಂದರ್ಭದಲ್ಲಿ ಆದ ಸಣ್ಣ ವಾಗ್ವಾದವು ಕ್ರಮೇಣ ಗಂಭೀರ ಸ್ವರೂಪಕ್ಕೆ ತಿರುಗಿತು. ಭದ್ರತಾ ಸಿಬ್ಬಂದಿ ಶೇಖರಪ್ಪ ಅವರ ಕೊರಳು ಹಿಡಿದು ಗೋಡೆಗೆ ಒತ್ತಿ ಹಲ್ಲೆ ನಡೆಸಿದರು. ಅದನ್ನು ಬಿಡಿಸಲು ಮುಂದಾದ ರತ್ನಾ ಕಮ್ಮಾರ ಎಂಬುವವರ ಮೇಲೆಯೂ ಹಲ್ಲೆ ನಡೆಸಿದರು’ ಎಂದು ದೂರಿದರು.