ಹುಬ್ಬಳ್ಳಿ: ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಕೊಡಲು ಬಂದ ನೌಕರರನ್ನು ಅಗೌರವ ತೋರಿದ ಆಡಳಿತಾಧಿಕಾರಿ ರಾಜೇಶ್ವರಿ ಜೈನಾಪುರ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿ, ಕಿಮ್ಸ್ ಶುಶ್ರೂಷಕರು ಬುಧವಾರ ರಾತ್ರಿಯೂ ಆಸ್ಪತ್ರೆ ಎದುರು ಪ್ರತಿಭಟನೆ ಮುಂದುವರೆಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ನಮ್ಮ ಅಹವಾಲು ಆಲಿಸಿ ಆಡಳಿತಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಜಿಲ್ಲಾಡಳಿತದ ಪರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದ ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ನಾಳೆ ಬೆಳಿಗ್ಗೆ 10ಕ್ಕೆ ಶುಶ್ರೂಷಕರ ನಿಯೋಗವನ್ನು ಜಿಲ್ಲಾಧಿಕಾರಿಗೆ ಭೇಟಿ ಮಾಡಿಸುವುದಾಗಿ ಭರವಸೆ ನೀಡಿದರು. ಆದರೂ, ಡಿ.ಸಿ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ, ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾನಗರ ಠಾಣೆ ಇನ್ಸ್ಪೆಕ್ಟರ್ ಆನಂದ ಒನಕುದರೆ ಅವರು ಶುಶ್ರೂಷಕರ ಮನವೊಲಿಸಲು ಯತ್ನಿಸಿದರು. ಅವರ ಮಾತಿಗೂ ಕಿವಿಗೊಡದ ಶುಶ್ರೂಷಕರು ಪ್ರತಿಭಟನೆ ಮುಂದುವರಿಸಿದರು.