ಹುಬ್ಬಳ್ಳಿ: ತಾಲ್ಲೂಕಿನ ಕಿರೇಸೂರ ಗ್ರಾಮದಲ್ಲಿ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮಾರುತಿ ದೇವರ ದೇವಸ್ಥಾನವನ್ನುಹಾನಗಲ್ ತಾಲ್ಲೂಕಿನ ಅಕ್ಕಿ ಆಲೂರಿನ ಮುತ್ತಿನಕಂಟಿ ಮಠದ ಚಂದ್ರಶೇಖರ ಸ್ವಾಮೀಜಿ ಹಾಗೂ ಕಾಂಗ್ರೆಸ್ ಮುಖಂಡ ಎನ್.ಎಚ್. ಕೋನರಡ್ಡಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಕೋನರಡ್ಡಿ, ‘ನಾನು ಶಾಸಕನಾಗಿದ್ದಾಗ ಗ್ರಾಮಕ್ಕೆ ನೂತನ ಗ್ರಾಮ ಪಂಚಾಯಿತಿ ಮಂಜೂರು ಮಾಡಿ ಕಟ್ಟಡ ನಿರ್ಮಿಸಿದ್ದೇನೆ. ಕಾಂಕ್ರೀಟ್ ರಸ್ತೆ, ಮಲಪ್ರಭಾ ಬಲದಂಡೆ ಕಾಲುವೆ ಆಧುನೀಕರಣ, ಕಿರೇಸೂರ-ಬ್ಯಾಹಟ್ಟಿ ರಸ್ತೆಯ ಡಾಂಬರೀಕರಣ, ಚಕ್ಕಡಿ ರಸ್ತೆಗಳ ಅಭಿವೃದ್ಧಿಯಂತಹ ಕಾರ್ಯಗಳನ್ನು ಮಾಡಿದ್ದೇನೆ. ಸುವರ್ಣ ಗ್ರಾಮ ಯೋಜನೆಯಡಿ ದೇವಸ್ಥಾನ ನಿರ್ಮಾಣಕ್ಕೆ ₹15 ಲಕ್ಷ ಅನುದಾನ ಕೊಟ್ಟಿದ್ದೇನೆ’ ಎಂದರು.
ಹುಬ್ಬಳ್ಳಿಯ ನೀಲಕಂಠೇಶ್ವರ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಮನಸೂರ ಮಠದ ಡಾ. ಬಸವರಾಜ ದೇವರು, ಮಾಜಿ ಸಚಿವ ಕೆ.ಎನ್. ಗಡ್ಡಿ, ಕಾಂಗ್ರೆಸ್ ಮುಖಂಡರಾದ ಅನಿಲಕುಮಾರ ಪಾಟೀಲ, ವಿನೋದ ಅಸೂಟಿ, ಸದಾನಂದ ಡಂಗನವರ, ಡಾ. ಎಂ.ಎನ್. ಹುರಳಿ, ವೈ.ಎಚ್. ಬಣವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ. ಪಾಟೀಲ ಇದ್ದರು.