ಹುಬ್ಬಳ್ಳಿ: ನಮಸ್ತೆ... ಮರದಿಂದ ತಯಾರಾಗಿ, ನೈಸರ್ಗಿಕ ಬಣ್ಣಗಳಿಂದ ಕಂಗೊಳಿಸುವ ನಾವು ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಕೊಂಡಪಲ್ಲಿಯ ವಿಶೇಷ ಗೊಂಬೆಗಳು. ‘ಕೊಂಡಪಲ್ಲಿ ಬೊಮ್ಮ’ ನಮ್ಮ ಹೆಸರು. ಚನ್ನಪಟ್ಟಣದ ಗೊಂಬೆಗಳನ್ನು ಹೋಲುತ್ತೇವೆ. ಅವುಗಳಷ್ಟೇ ನಾವೂ ಐತಿಹ್ಯ ಹೊಂದಿದ್ದೇವೆ.
ಆಂಧ್ರಪ್ರದೇಶದಿಂದ ಧಾರವಾಡದ ಯುವಜನೋತ್ಸವ ನೋಡಲು ನಾವೂ ಬಂದಿದ್ದೇವೆ. ಇಲ್ಲಿನ ಕರ್ನಾಟಕ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಿರುವ ಮಳಿಗೆಯೊಂದರಲ್ಲಿ ನಮ್ಮನ್ನು ಇಡಲಾಗಿದೆ. ಹಲವರು ಚನ್ನಪಟ್ಟಣದ ಗೊಂಬೆಗಳೆಂದೇ ತಿಳಿದು, ಕುತೂಹಲದಿಂದ ವೀಕ್ಷಿಸುತ್ತಾರೆ. ನಮ್ಮನ್ನು ಮಾರಾಟಕ್ಕಿಟ್ಟವರ ಬಳಿ ಮಾಹಿತಿ ಪಡೆದು, ವೈಶಿಷ್ಟ್ಯ ತಿಳಿದು ಕಣ್ತುಂಬಿಕೊಳ್ಳುತ್ತಾರೆ.
ಅಂದ ಹಾಗೆ, ನಮ್ಮ ಮೂಲ ರಾಜಸ್ಥಾನ. 16ನೇ ಶತಮಾನದಿಂದ ಕೊಂಡಪಲ್ಲಿಯಲ್ಲಿ ನಮ್ಮನ್ನು ತಯಾರಿಸುತ್ತಿದ್ದಾರೆ. ತೆಲ್ಲಪೊನಿಕಿ ಎಂಬ ಮೃಧುವಾದ ಮರದ ತುಂಡುಗಳಿಂದ ನಮ್ಮನ್ನು ಕೆತ್ತಿ, ಪ್ರತಿಯೊಂದು ಭಾಗವನ್ನು ಪ್ರತ್ರೇಕವಾಗಿ ಜೋಡಿಸಿ, ಮುಕ್ಟ ಎಂಬ ಅಂಟು ಹಚ್ಚುತ್ತಾರೆ.
ನಮ್ಮ ಆಕೃತಿಗೆ ಅನುಸಾರ ಜಲವರ್ಣ, ತೈಲವರ್ಣ ಮೊದಲಾದ ನೈಸರ್ಗಿಕ ಬಣ್ಣಗಳನ್ನೇ ಬಳಸಿ, ಕಂಗೊಳಿಸುವಂತೆ ಮಾಡುತ್ತಾರೆ. ಹಬ್ಬದ ದಿನಗಳಲ್ಲಿ ಪ್ರದರ್ಶನಕ್ಕೆ ಇಡುತ್ತಾರೆ. ನಮ್ಮ ಪರಂಪರೆ ಮಹತ್ವದ್ದಾಗಿರುವುದರಿಂದ ಜಾಗತಿಕ ಮಾನ್ಯತೆ (ಜಿಐ) ಸಹ ಸಿಕ್ಕಿದೆ.
ನಮ್ಮ ವಿಶೇಷವೇನೆಂದರೆ, ಪುರಾಣ ಮತ್ತು ಗ್ರಾಮೀಣ ಸೊಗಡು ಬಿಂಬಿಸುವಂತಹ ಗೊಂಬೆಗಳನ್ನಾಗಿ ರೂಪಿಸುವುದು. ಪ್ರಾಣಿ– ಪಕ್ಷಿಗಳಾಗಿಯೂ ರೂಪ ಪಡೆದಿದ್ದೇವೆ. ಇಷ್ಟು ಹೇಳಿದ ಮೇಲೆ, ನಮ್ಮ ಬಗ್ಗೆ ನಿಮಗೆ ಕುತೂಹಲ ಹೆಚ್ಚಾಗಿರಬೇಕಲ್ಲವೇ? ಹಾಗಿದ್ದರೆ, ಯುವ ಜನೋತ್ಸವಕ್ಕೆ ಬಂದು ಕಣ್ತುಂಬಿಕೊಳ್ಳಿ.