ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹25 ಸಾವಿರ ಕೋಟಿ ವಹಿವಾಟು ನಡೆಸಿದ ಕೆವಿಜಿ ಬ್ಯಾಂಕ್‌

Last Updated 18 ಜೂನ್ 2019, 12:55 IST
ಅಕ್ಷರ ಗಾತ್ರ

ಧಾರವಾಡ: ‘ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 2018-19ನೇ ಸಾಲಿನಲ್ಲಿ ಶೇ 7.79 ಪ್ರಗತಿ ದರದಲ್ಲಿ ₹25,257 ಕೋಟಿ ವಹಿವಾಟು ದಾಖಲಿಸಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಎಸ್. ರವೀಂದ್ರನ್ ಹೇಳಿದರು.

‘ಈ ವರ್ಷ ಬ್ಯಾಂಕಿನ ಕಾರ್ಯ ನಿರ್ವಹಣ ಲಾಭ ₹203.26 ಕೋಟಿಗಳಾಗಿದ್ದು, ಈ ಪೈಕಿ ಉಪಬಂಧ ಹಾಗೂ ಆದಾಯ ತೆರಿಗೆ ಪಾವತಿಸಿಯೂ ಬ್ಯಾಂಕ್ ₹50.12 ಕೋಟಿ ನಿವ್ವಳ ಲಾಭಗಳಿಸಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬ್ಯಾಂಕಿನ ನಿವ್ವಳ ಸಂಪತ್ತು ₹1,693 ಕೋಟಿಯಿಂದ ₹1,743 ಕೋಟಿಗೆ ವೃದ್ಧಿಸಿದೆ.ಬ್ಯಾಂಕ್ ಸಾಲ ಹಾಗೂ ಮುಂಗಡಗಳು ಶೇ 8.34 ಪ್ರಗತಿ ದರದಲ್ಲಿ ₹11,362 ಕೋಟಿಗೆ ತಲುಪಿದೆ. ಕಳೆದ ಐದು ವರ್ಷದಿಂದ ಸತತ ಬರ ಇದ್ದುದರಿಂದ ಬ್ಯಾಂಕಿನ ಸಾಲ ವಸೂಲಾತಿಯ ಮೇಲೆ ಪರಿಣಾಮ ಬೀರಿದ್ದರೂ ಅನುತ್ಪಾದಕ ಸಾಲದ ಮೇಲೆ ಬ್ಯಾಂಕ್ ಉತ್ತಮ ನಿಯಂತ್ರಣ ಸಾಧಿಸಿದೆ’ ಎಂದರು.

‘ಠೇವಣಿ ಸಂಗ್ರಹಣೆಯಲ್ಲಿ ಶೇ 7.34 ಪ್ರಗತಿ ದರದಲ್ಲಿ ₹13,895 ಕೋಟಿ ಮಟ್ಟವನ್ನು ತಲುಪಿದೆ ಜತೆಗೆ ಗ್ರಾಹಕರ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದೆ.ಸಾಲದ ಬಡ್ಡಿಯನ್ನು ಸಾಕಷ್ಟು ತಗ್ಗಿಸಲಾಗಿದ್ದು, ಹೊಸ ಆರ್ಥಿಕ ವರ್ಷದಲ್ಲಿ ಕೃಷಿ ಪ್ರವಾಸೋದ್ಯಮ ಒಳಗೊಂಡು 10 ನೂತನ ಸಾಲ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವುಗಳ ಜತೆಗೆ ಗೃಹಸಾಲ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕೃಷಿ ರಂಗದಲ್ಲಿ ಹೂಡಿಕೆ ಸಾಲ ಸೇರಿ ಸಮಗ್ರ ಕೃಷಿ ಪದ್ಧತಿಗೆ ಈ ಆರ್ಥಿಕ ವರ್ಷದಲ್ಲಿ ಆದ್ಯತೆ ನೀಡಲಾಗುವುದು’ ಎಂದು ರವೀಂದ್ರನ್ ಹೇಳಿದರು.

‘ಕಳೆದ ಸಾಲಿನಲ್ಲಿ ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿ 1.18 ಲಕ್ಷ ರೈತರಿಗೆ ₹2,021 ಕೋಟಿ ಸಾಲ ವಿತರಿಸಿದ್ದು, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಬ್ಯಾಂಕ್ 65ಸಾವಿರ ಉದ್ಯೋಗ ಆಕಾಂಕ್ಷಿಗಳಿಗೆ ₹951 ಕೋಟಿ ಸಾಲ ನೀಡಿದೆ. ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ 709 ಫಲಾನುಭವಿಗಳಿಗೆ ₹64.18 ಕೋಟಿ ಸಾಲ ವಿತರಿಸಿದೆ. ಅಟಲ್ ಪಿಂಚಣಿ ಯೋಜನೆ ಅಡಿ ಪಿಂಚಣಿಗಾಗಿ ಇಲ್ಲಿಯವರೆಗೆ 53,862 ಜನರು ನೋಂದಾಯಿಸಿಕೊಂಡಿದ್ದಾರೆ. ಬ್ಯಾಂಕಿನ ಈ ಕಾರ್ಯ ಪರಿಗಣಿಸಿ ಭಾರತೀಯ ಪಿಂಚಣಿ ಪ್ರಾಧಿಕಾರ ಬ್ಯಾಂಕಿಗೆ ರಾಷ್ಟ್ರಮಟ್ಟದ ನಾಲ್ಕು ಪ್ರಶಸ್ತಿಗಳನ್ನು ನೀಡಿದೆ’ ಎಂದರು.

ಬ್ಯಾಂಕ್ ಮಹಾ ಪ್ರಬಂಧಕ ಐ.ಜಿ. ಕುಮಾರ ಗೌಡ, ಸಹಾಯಕ ಮಹಾ ಪ್ರಬಂಧಕ ಶ್ರೀಕಾಂತ ಹೆಗಡೆ, ಮುಖ್ಯ ಪ್ರಬಂಧಕ ಕೆ.ಟಿ. ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT