ಧಾರವಾಡ: ಚುನಾವಣೆಗೂ ಪೂರ್ವದಲ್ಲಿ ನಾಡಿನ ಜನತೆಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದು ಬಡವರ ಬದುಕು ಬೆಳಗಿಸುತ್ತಿರುವ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ತಮ್ಮದೇ ಆದ ಸಂತೋಷ್ ಲಾಡ್ ಫೌಂಡೇಶನ್ ಮೂಲಕ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತ ಬರುತ್ತಿರುವ ಸಂತೋಷ್ ಲಾಡ್ ಅವರು ‘ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರ ಪರವಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಅರ್ಥಪೂರ್ಣ ಕಾರ್ಯಕ್ರಮಗಳ ಗುಚ್ಛ ಸಾಂಸ್ಕೃತಿಕ ಸಂಭ್ರಮವು ಮೂಡಿ ಬಂದಿತು. 77ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ನಡೆದ ಅದ್ಧೂರಿ ಕಾರ್ಯಕ್ರಮ ಹಲವು ವಿಶೇಷತೆಗಳೊಂದಿಗೆ ಧಾರವಾಡಿಗರ ಮನಸೂರೆಗೊಂಡಿತು.
ಸಮಾಜಮುಖಿ ಕೆಲಸಗಳಲ್ಲಿ ವಿಶಿಷ್ಟ ಸಾಧನೆಗೈದ ಸಾಧಕರಿಗೆ ಹಾಗೂ ಹೆಮ್ಮೆಯ ವೀರ ಯೋಧರಿಗೆ ಗೌರವ ಸನ್ಮಾನ ಹಮ್ಮಿಕೊಂಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಜಿಲ್ಲೆಯ ಐದು ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.
ಸಂತೋಷ್ ಲಾಡ್ ಫೌಂಡೇಶನ್ ಮೊದಲಿಂದಲೂ ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುತ್ತ ಬರುತ್ತಿರುವುದು ಗಮನಾರ್ಹ.
ಭಾಗ್ಯಗಳ ಸರದಾರ, ಕೊಟ್ಟ ಮಾತಿಗೆ ತಕ್ಕಂತೆ ನಡೆಯುವ ಧೀಮಂತ ನಾಯಕ, ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಿಗೆ ವಿಶೇಷವಾಗಿ ಲೇಸರ್ ಶೋ ಮೂಲಕ ಅಭಿನಂದನೆ ಸಲ್ಲಿಸಿದ್ದು ಕಾರ್ಯಕ್ರಮದ ಪ್ರಮುಖ ಅಂಶ ಎಂದರೆ ತಪ್ಪಾಗಲಿಕ್ಕಿಲ್ಲ.
ಖ್ಯಾತ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರ ತಂಡದಿಂದ ಪ್ರದರ್ಶನಗೊಂಡ ಸಂವಿಧಾನ ಪೀಠಿಕೆ ಕುರಿತ ನಾಟಕ ಎಲ್ಲರ ಮನರಂಜಿಸಿತು. ಸಂವಿಧಾನ ಪೀಠಿಕೆ ಕುರಿತು ಮನಮುಟ್ಟುವಂತೆ ಕಲಾವಿದರು ನಾಟಕ ಪ್ರದರ್ಶಿಸಿದರು.
ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಅವರ ಗಾನಸುಧೆಗೆ ಪ್ರೇಕ್ಷಕರು ಕಳೆದುಹೋದರು. ಎಲ್ಲಾದರೂ ಇರು ಎಂತಾದರೂ ಇರು, ನೋಡಯ್ಯ ಕ್ವಾಟೆ ಲಿಂಗವೇ ಹಾಡುಗಳಲ್ಲದೆ ಶಿಶುನಾಳ ಶರೀಫರ ಗೀತೆಗಳು, ಬಸವಣ್ಣನವರ ವಚನಗಳ ಗಾಯನಕ್ಕೆ ತಲೆದೂಗದವರೇ ಇರಲಿಲ್ಲ.
ಇಂಡಿಯನ್ ಐಡಲ್–18ರ ವಿಜೇತ ಗಾಯಕ ಸಲ್ಮಾನ್ ಅಲಿ ಅವರ ಸಂಗೀತ ಸಂಜೆ ಇಡೀ ಕ್ರೀಡಾಂಗಣದಲ್ಲಿ ನೆರೆದಿದ್ದವರ ಹೃನ್ಮನಗಳನ್ನು ತಣಿಸಿತು. ಅವರ ಗಾಯನಸಿರಿಗೆ ನೆರೆದವರು ತಮ್ಮನ್ನೇ ಮರೆತು ಹೋಗಿದ್ದರು.
ಈ ಎಲ್ಲ ಕಾರ್ಯಕ್ರಮವು ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಅತ್ಯಾಧುನಿಕ ಧ್ವನಿ–ಬೆಳಕಿನ ವ್ಯವಸ್ಥೆಯಲ್ಲಿ ನಡೆಯಿತು. ಪ್ರೇಕ್ಷಕರಿಗೆ ಆಸನ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸಲಾಗಿತ್ತು. ಸಣ್ಣ ಮಳೆಯ ಸಿಂಚನವಾದರೂ ಜನರು ಕಾರ್ಯಕ್ರಮ ಬಿಟ್ಟು ತೆರಳಲಿಲ್ಲ. ರಾಜ್ಯದ ಮುಖ್ಯಮಂತ್ರಿಯವರ ಕಾರ್ಯವನ್ನು ಕೊಂಡಾಡುತ್ತ ರಾಜ್ಯ ಸರ್ಕಾರದ ಸಾಧನೆಗಳನ್ನು ಮನದಲ್ಲೇ ನೆನೆಸಿಕೊಂಡು ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.