ಹುಬ್ಬಳ್ಳಿ: ಇಲ್ಲಿನ ಕೋಟಿಲಿಂಗ ನಗರದ ರಾಜೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಕೇದಾರ ಮಠದ ಭೀಮಾಶಂಕರಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನಡೆಯಿತು. ಮಂತ್ರಪಠಣ ಮತ್ತು ಭಜನೆ ಪೂಜೆಗೆ ಮೆರುಗು ತಂದಿತು.
ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ, ‘ಲೀಯತೆ ಮತ್ತು ಗಮ್ಯತೆಯೇ ಲಿಂಗದ ಅರ್ಥ. ಲಿಂಗಪೂಜೆ ಮಾಡುವುದರಿಂದ ಎಲ್ಲಾ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ. ಮಾನವನ ದೇಹದ ಅಂಗಗಳು ಲಿಂಗದ ಪ್ರತಿರೂಪವಾಗಿರುವುದರಿಂದ ಎಲ್ಲರೂ ಲಿಂಗವಂತರೇ ಆಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
‘ಆಂತರ್ಯ ಲಿಂಗದ ಸಾಕ್ಷಾತ್ಕಾರಕ್ಕೆ ಬಾಹ್ಯವಾಗಿ ಲಿಂಗಪೂಜೆ ಮಾಡಬೇಕು. ವೀರಶೈವರು ಯಾವುದೇ ಕಾರಣಕ್ಕೂ ಲಿಂಗಧಾರಣೆ ಬಿಡಬಾರದು. ಅದೇ ನಮ್ಮನ್ನು ರಕ್ಷಿಸುತ್ತದೆ. ಭಸ್ಮಧಾರಣೆ ಮಾಡುವುದರಿಂದ ಆತ್ಮಸಾಕ್ಷಾತ್ಕಾರ ಸಾಧ್ಯವಾಗುತ್ತದೆ. ಸಮಾಜದವರು ಧರ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.
ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಲಿಂಗದೀಕ್ಷೆ ಪಡೆದ ವೀರಶೈವರು ಕೊನೆವರೆಗೂ ಅದನ್ನು ಧರಿಸುವುದೇ ವಿಶಿಷ್ಟ ಪರಂಪರೆ. ವಿಭೂತಿ, ರುದ್ರಾಕ್ಷಿ ಹಾಗೂ ಲಿಂಗವು ವೀರಶೈವ ಧರ್ಮದ ಲಾಂಛನಗಳಾಗಿವೆ. ಇವುಗಳನ್ನು ಬಿಡಬಾರದು ಎಂಬುದು ರೇಣುಕಾಚಾರ್ಯರ ಸಂದೇಶವಾಗಿದೆ’ ಎಂದು ಹೇಳಿದರು.
ಡಾ. ಎನ್.ಎ. ಚರಂತಿಮಠ, ಗಂಗಾಧರಸ್ವಾಮಿ ಹಿರೇಮಠ, ಕೃಷ್ಣಾ ಉರಣಕರ, ಸಿದ್ಧಲಿಂಗಪ್ಪ ಕಮಡೊಳ್ಳಿ, ಮಲ್ಲಿಕಾರ್ಜುನ ಕುರಗುಂದ, ಪರಮೇಶ್ವರ ಮುಡ್ಕಿ, ಬಸಯ್ಯ ಹಿರೇಮಠ ಇದ್ದರು.