ನವಲಗುಂದ: ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಗ್ರೇಡ್ 2 ತಹಶೀಲ್ದಾರ್ ಎಂ.ಜೆ. ಹೊಕ್ರಾಣಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟ, ಪಕ್ಷಾತೀತ ರೈತ ಹೋರಾಟ ಸಮಿತಿ ಮನವಿ ಸಲ್ಲಿಸಿತು.
ರೈತ ಮುಖಂಡ ಸುಭಾಷ ಚಂದ್ರ ಗೌಡ ಪಾಟೀಲ, ‘ನ್ಯಾಯಾಧಿಕರಣ ತೀರ್ಪು ಬಂದು ಮೂರು ವರ್ಷವಾದರೂ ಕಳಸಾ ಬಂಡೂರಿ ಸ್ಥಳಗಳಲ್ಲಿ ಯಾವುದೇ ಕಾಮಗಾರಿ ಆರಂಭಿಸಿಲ್ಲ ಹಾಗೂ ರಾಜ್ಯ ಸರ್ಕಾರ ಈ ಯೋಜನೆ ಗಾಗಿ ಅನುದಾನವೂ ಮಿಸಲಿರಿಸಿಲ್ಲ’ ಎಂದರು.
ಸಮಿತಿ ಅಧ್ಯಕ್ಷ ಸಿದ್ದಪ್ಪ ಮುಪ್ಪಯ್ಯನವರ, ‘ಶೀಘ್ರವಾಗಿ ಕಾಮಗಾರಿ ಆರಂಭಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ನಮ್ಮ ರಾಜ್ಯದ ಸಂಸದರ ಮೇಲೆ ಒತ್ತಡ ಹೇರಲು ಜುಲೈ 24ರಂದು ದೆಹಲಿ ಚಲೋ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಭಾಗದ ಶಾಸಕರು, ಸಂಸದರು, ಸಚಿವರು, ದೆಹಲಿ ಚಲೋ ಚಳವಳಿಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.