ಧಾರವಾಡ: ‘ರಾಜಧಾನಿ ಬೆಂಗಳೂರಿನಲ್ಲಿ ‘ಅ‘ಕಾರ ಹಾಗೂ ‘ಹ’ಕಾರ ವ್ಯತ್ಯಾಸ ತಿಳಿದ ಕನ್ನಡಿಗರು, ಮಾತೃಭಾಷೆ ಬೇರೆ ಇದ್ದರೂ, ಶುದ್ಧ ಕನ್ನಡ ಗೊತ್ತಿರುವವರ ಸಂಖ್ಯೆ ಶೇ 26ರಷ್ಟು ಮಾತ್ರ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ ಜೋಶಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನೂತನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರ ಪದಗ್ರಹಣ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಬುಧವಾರ ಮಾತನಾಡಿದರು.
‘ನಮ್ಮಲ್ಲಿ ಪ್ರದೇಶಗಳಿಗೆ ಅನುಗುಣವಾಗಿ ಭಾಷೆಗಳ ಉಚ್ಛಾರ ಬದಲಾಗುತ್ತವೆ. ಆದರೆ ಶುದ್ಧ ಹಾಗೂ ಸ್ಪಷ್ಟ ಕನ್ನಡವನ್ನು ನಾವು ಉಳಿಸಿ ಬೆಳೆಸಬೇಕು. ಇಡೀ ಜಗತ್ತಿನಲ್ಲಿ ಸಂಸ್ಕೃತ ಹಾಗೂ ಕನ್ನಡ ಭಾಷೆಗಳು ಮಾತ್ರ ಅತ್ಯಂತ ಶುದ್ಧ ಎಂಬ ಕೀರ್ತಿಗೆ ಪಾತ್ರವಾಗಿವೆ. ನಾವು ಅದರ ವೈಶಿಷ್ಟ್ಯತೆಯನ್ನು ಕಾಪಾಡಬೇಕಿದೆ’ ಎಂದರು.
‘ಮುಂದಿನ ಒಂದು ವರ್ಷದಲ್ಲಿ ಮೂರು ಲಕ್ಷ ಸದಸ್ಯರನ್ನು ಮಾಡುವ ಗುರಿ ಇದೆ. ಕಸಾಪವನ್ನು ಗ್ರಾಮ ಮಟ್ಟದಲ್ಲಿ ಕಟ್ಟುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಲಿದ್ದೇನೆ. ಮುಂದಿನ ಬಾರಿ ಮೊಬೈಲ್ ಆ್ಯಪ್ ಬಳಸಿ, ಒಟಿಪಿ ಸುರಕ್ಷತೆ ಆಧಾರಿತ ಚುನಾವಣೆಯನ್ನು ನಡೆಸುವ ಯೋಜನೆ ಇದೆ‘ ಎಂದರು.