ಹುಬ್ಬಳ್ಳಿ: ಈಚೆಗೆ ಲಿಂಗೈಕ್ಯರಾದ ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಭಾರತರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಇಡೀ ಕನ್ನಡನಾಡು ಒತ್ತಾಯಿಸಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಈ ಬೇಡಿಕೆಗೆ ಕುರುಡಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ತಾರಾದೇವಿ ವಾಲಿ ಟೀಕಿಸಿದರು.
ಶ್ರೀಗಳಿಗೆ ನೀಡುವ ಬದಲು ನಾನಾಜಿ ದೇಶಮುಖ್, ಭೂಪೇನ್ ಹಜಾರಿಕಾ ಹಾಗೂ ಪ್ರಣವ್ ಮುಖರ್ಜಿ ಅವರಿಗೆ ಘೋಷಿಸಿದೆ. ಶ್ರೀಗಳ ಸಾಧನೆಯನ್ನು ಗೌರವಿಸಿ ಅವರಿಗೂ ಘೋಷಿಸಿದ್ದಕ್ಕೆ ಪ್ರಶಸ್ತಿಯು ತನ್ನ ಮೌಲ್ಯವನ್ನು ವೃದ್ಧಿಸಿಕೊಂಡಂತಾಗುತ್ತಿತ್ತು ಎಂದರು.
ಪಾಲಿಕೆ ಸದಸ್ಯೆ ದೀಪಾ ಗೌರಿ, ನವೀದ್ ಮುಲ್ಲಾ ಸೇರಿದಂತೆ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದರು.