ಹುಬ್ಬಳ್ಳಿ: ಹೊಸಪೇಟೆ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸತತ ಮೂರನೇ ದಿನ ಗುರುವಾರವೂ ಮಳೆ ಮುಂದುವರೆದಿದೆ.
ಸತತ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲ್ಲೂಕಿನ ಕಮಲಾಪುರದ ಆರನೇ ವಾರ್ಡ್ನಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಗೋಡೆ ಕುಸಿದು ಚಾವಣಿಯ ಸಿಮೆಂಟ್ ಶೀಟ್ಗಳು ಮುರಿದು ಬಿದ್ದಿವೆ. ತಾಲ್ಲೂಕಿನ ಕಡ್ಡಿರಾಂಪುರ, ಹೊಸೂರು, ಹಂಪಿಯಲ್ಲಿ ಬಾಳೆತೋಟಕ್ಕೆ ನೀರು ನುಗ್ಗಿದೆ.
ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣದಲ್ಲಿ ಎರಡು ತಾಸು ಧಾರಾಕಾರವಾಗಿ ‘ಉತ್ತರಿ’ ಮಳೆಸುರಿಯಿತು.
ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಧಾರಾಕಾರ ಮಳೆಯಾಯಿತು. ಯಾದಗಿರಿ ನಗರ ಸೇರಿ ಶಹಾಪುರ, ಸುರಪುರ ಮತ್ತು ಹುಣಸಗಿಯಲ್ಲಿ ಉತ್ತಮ ಮಳೆಯಾಯಿತು.