ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಕಿಡಿಗೇಡಿಗಳು ಮಸಿ ಬಳಿದಿರುವುದು ಶಾಂತಿ ಕದಡುವ ಕೃತ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಘಟನೆ ಖಂಡಿಸಿದ್ದಾರೆ.
‘ಎಲ್ಲರೂ ನಮ್ಮವರೇ ಎಂಬ ಬಸವಣ್ಣನವರ ತತ್ವದಂತೆ ಬದುಕುತ್ತಿರುವ ಸಮಾಜದಲ್ಲಿ, ಸಮಾಜಘಾತುಕ ವ್ಯಕ್ತಿಗಳು ಇಂತಹ ಕೃತ್ಯ ಎಸಗಿರುವುದು ಖಂಡನೀಯ.ಭಾಷೆ ಹಾಗೂ ಭಾವನೆಗಳ ಮಧ್ಯೆ ಬೆಂಕಿ ಹಚ್ಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಿಡಿಗೇಡಿಗಳು ಹವಣಿಸುತ್ತಿದ್ದಾರೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಘಟನೆಯಿಂದ ಸಮಾಜದ ಬಂಧುಗಳ ಹಾಗೂ ಬಸವ ಅನುಯಾಯಿಗಳ ಮನಸ್ಸಿಗೆ ಆಘಾತವಾಗಿದೆ. ಇಂತಹ ಘಟನೆಗಳನ್ನು ಸಹಿಸಲು ಅಸಾಧ್ಯ. ಕೃತ್ಯವನ್ನು ದೇಶದ್ರೋಹ ಪ್ರಕರಣ ಎಂದು ನಿರ್ಣಯಿಸಿ, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.