ಹುಬ್ಬಳ್ಳಿ: ಶಿಕ್ಷಕರೊಬ್ಬರು ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಭಾವಚಿತ್ರದ ಬ್ಯಾಡ್ಜ್ ಧರಿಸಿ, ಇಲ್ಲಿನ ದೇಶಪಾಂಡೆ ನಗರದ ಎನ್.ಆರ್. ದೇಸಾಯಿ ರೋಟರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡುವ ಮೂಲಕ, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದರು.
ಮತಗಟ್ಟೆಗೆ ಬಂದ ಇಬ್ಬರು ಶಿಕ್ಷಕರು ವಿಜಯದ ಸಂಕೇತ ಪ್ರದರ್ಶಿಸಿದರು. ಈ ಪೈಕಿ, ನಗರದ ಸಿದ್ದರಾಮೇಶ್ವರ ಪ್ರೌಢಶಾಲೆಯ ಶಶಿಧರ ಗಾಜಿ ಅವರು ಬ್ಯಾಡ್ಜ್ ಧರಿಸಿದ್ದರು. ಈ ಕುರಿತು, ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಚುನಾವಣಾ ಅಧಿಕಾರಿಗಳು ಮತಗಟ್ಟೆಗಳ ಬಳಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮತಗಟ್ಟೆ ಸುತ್ತಮುತ್ತ ಮಾಡಬೇಕು. ಘಟನೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.