ಹುಬ್ಬಳ್ಳಿ: ‘ಮುಸಲ್ಮಾನರು ಬಿಜೆಪಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆದ್ದರಿಂದ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಅವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ತನಕ ಟಿಕೆಟ್ ಕೊಡುವುದೂ ಇಲ್ಲ’ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರಿಶ್ಚಿಯನ್ನರ ವಿರುದ್ಧವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಕಾಂಗ್ರೆಸ್ ಕುತಂತ್ರದಿಂದ ಅ ಧರ್ಮದ ಜನ ನನ್ನ ವಿರುದ್ಧ ಅಸಮಾಧಾನಗೊಂಡಿದ್ದಾರೆ. ನನ್ನ ಬಾಯಿಂದ ಕ್ರಿಶ್ಚಿಯನ್ ಎನ್ನುವ ಪದವೇ ಬಂದಿಲ್ಲ’ ಎಂದರು.
‘ಬಿಜೆಪಿ ರಾಷ್ಟ್ರೀಯವಾದಿ ಪಕ್ಷ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನಮ್ಮನ್ನು ಕೋಮುವಾದಿ ಎಂದು ಕರೆಯುತ್ತಿವೆ. ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲರು ಬರೆದ ಪತ್ರ ಬಹಿರಂಗವಾದ ಬಳಿಕ ಯಾರು ಕೋಮುವಾದಿ ಎಂಬುದು ಗೊತ್ತಾಗಿದೆ’ ಎಂದು ಲೇವಡಿ ಮಾಡಿದರು.