ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳೇ ಗಲಭೆಗಳಿಗೆ ಕಾರಣ: ಕಟೀಲ್ ಆರೋಪ

Last Updated 26 ಏಪ್ರಿಲ್ 2022, 6:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳೇ ಇತ್ತೀಚೆಗೆ ನಡೆಯುತ್ತಿರುವ ಗಲಭೆಗಳಿಗೆ ಕಾರಣವಾಗಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಇತ್ತೀಚೆಗೆ ಗಲಭೆ ನಡೆದ ಹಳೇಹುಬ್ಬಳ್ಳಿ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ, ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

'ಸಿದ್ದರಾಮಯ್ಯ ನಡೆಸಿದ್ದ ಐದು ವರ್ಷದ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಅಂಥ ಮುಖ್ಯಮಂತ್ರಿಯನ್ನು ರಾಜ್ಯ ಹಿಂದೆಂದೂ ಕಂಡಿಲ್ಲ. ಅವರ ಆಡಳಿತದ ಅವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆ ನಡೆಯಿತು. ಒಬ್ಬರನ್ನು ಸಹ ಬಂಧಿಸಲು ಅವರಿಂದ ಸಾಧ್ಯವಾಗಿಲ್ಲ. ಟಿಪ್ಪು ಜಯಂತಿ ಹೆಸರಲ್ಲಿ ರಾಜ್ಯದಾದ್ಯಂತ ಗಲಭೆಗಳು ನಡೆದವು. ಮೈಸೂರು ಹಾಗೂ ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ಹತ್ಯೆಯಾಯಿತು. ಅವುಗಳ ಹಿಂದಿರುವ ಶಕ್ತಿಗಳನ್ನು ಸಹ ಗುರುತಿಸುವ ಕೆಲಸ ಆಗಲಿಲ್ಲ. ಆಗಲೇ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಈಗ ಇಂತಹ ಗಲಭೆಗಳು ನಡೆಯುತ್ತಿರಲಿಲ್ಲ' ಎಂದು ಹೇಳಿದರು.

'ಇತ್ತೀಚೆಗೆ ರಾಜ್ಯದಲ್ಲಿ ನಡೆದ ಗಲಭೆಗಳನ್ನು ಬಿಜೆಪಿ ಸರ್ಕಾರ ಸಮರ್ಥವಾಗಿ ನಿಯಂತ್ರಿಸಿದೆ. ಗೃಹ ಇಲಾಖೆ ತುರ್ತು ಸಂದರ್ಭದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡು ಹಲವು ಕೋಮು ಗಲಭೆಯನ್ನು ಹತ್ತಿಕ್ಕಿದೆ. ಈ ಎಲ್ಲ ಗಲಭೆಗಳಿಗೂ ಸಿದ್ದರಾಮಯ್ಯರೇ ಪ್ರೇರಣೆ ಇರಬಹುದು' ಎಂದು ಆರೋಪಿಸಿದ ಕಟೀಲ್, 'ಈಗಲೂ ಸಿದ್ದರಾಮಯ್ಯರ ಆಡಳಿತವೇ ಇದ್ದಿದ್ದರೆ ಬಂಧನಕ್ಕೊಳಗಾದ ಆರೋಪಿಗಳೆಲ್ಲ ನಿರಾತಂಕವಾಗಿ ಹೊರಗೆ ಇರುತ್ತಿದ್ದರು. ಅಲ್ಲದೆ, ಅವರ ರಕ್ಷಣೆಯನ್ನು ಸಹ ಸಿದ್ದರಾಮಯ್ಯರೇ ಮಾಡುತ್ತಿದ್ದರು' ಎಂದು ಹೇಳಿದರು.

'ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿಗಿಂತ ರಾಜ್ಯದಲ್ಲಿರುವ ಕಾನೂನುಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸಂಘಟನೆಗಳ ನಿಷೇಧಕ್ಕೆ ಸರ್ಕಾರ ಸೂಕ್ತ‌ ತೀರ್ಮಾನ ಕೈಗೊಳ್ಳಲಿದೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಪ್ರಕರಣದಂತೆ ಪೂರ್ವ ನಿಯೋಜಿತ ಕೃತ್ಯ' ಎಂದು ಅಭಿಪ್ರಾಯಪಟ್ಟರು.

ಶಾಸಕ ಅರವಿಂದ ಬೆಲ್ಲದ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮೋಹನ ಲಿಂಬಿಕಾಯಿ, ಪಾಂಡುರಂಗ ಪಾಟೀಲ, ವೀರಭದ್ರಪ್ಪ ಹಾಲರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT