ಹುಬ್ಬಳ್ಳಿ: ಸುದ್ದಿ ಮಾಧ್ಯಮಗಳು ಇಂದು ಮೌಲ್ಯ ಮತ್ತು ಮಾನವೀಯತೆ ಕಳೆದುಕೊಂಡಿವೆ. ಪಂಥೀಯತೆ, ಜಾತೀಯತೆ ಪತ್ರಿಕಾರಂಗದಲ್ಲಿ ನುಸುಳಿದೆ ಎಂದು ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಕಳವಳ ವ್ಯಕ್ತಪಡಿಸಿದರು.
ಲೋಕಹಿತ ಟ್ರಸ್ಟ್ ವತಿಯಿಂದ ಕೆಸಿಸಿಐ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಆದ್ಯ ಪತ್ರಕರ್ತ ನಾರದ ಜಯಂತಿ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಆಶಯ ಭಾಷಣ ಮಾಡಿದರು.
ಪತ್ರಿಕಾರಂಗ ಇಂದು ತ್ರಿಶಂಕು ಸ್ಥಿತಿಯಲ್ಲಿದೆ. ಹಿಂದಿನ ನಿಲುವುಗಳಿಗೂ ಇಂದಿನ ಧೋರಣೆಗಳಿಗೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಈ ಹಿಂದೆ ಪತ್ರಿಕಾರಂಗದಲ್ಲಿ ಸಮಾಜಮುಖಿ ಚಿಂತನೆ, ವಸ್ತುನಿಷ್ಠತೆ ಮತ್ತು ವೃತ್ತಧರ್ಮಕ್ಕೆ ಬದ್ಧತೆ ಇತ್ತು. ಈ ಅಂಶಗಳು ಇಂದು ಕಾಣಿಸುತ್ತಿಲ್ಲ ಎಂದರು.
ಮಾಧ್ಯಮ ಕ್ಷೇತ್ರದಲ್ಲಿ ಕೆಲವರು ಮಾಡಿರುವ ತಪ್ಪಿನಿಂದಾಗಿ ಇಂದು ಸಮಾಜದಲ್ಲಿ ಪತ್ರಕರ್ತ ಎಂದು ಹೇಳಿಕೊಳ್ಳಲು ಮುಜುಗರ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಗಳಂತೆ ಪತ್ರಕರ್ತರೂ ಭ್ರಷ್ಟರು, ಲಂಪಟರು ಎಂಬ ಭಾವನೆ ಸಮಾಜದಲ್ಲಿ ನೆಲೆಯೂರಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷಪಾತ ಧೋರಣೆ ಅನುಸರಿಸುತ್ತಾರೆ ಎಂಬ ಕಾರಣಕ್ಕೆ ಮಾಧ್ಯಮಗಳ ಬಗ್ಗೆ ಜನರಲ್ಲಿ ಸಂಶಯ ಮನೆ ಮಾಡಿದೆ. ಜಾಹೀರಾತು ಮತ್ತು ಸುದ್ದಿಗಳ ನಡುವಿನ ಗೆರೆ ಕಣ್ಣಿಗೆ ಕಾಣದಷ್ಟು ತೆಳುವಾಗಿದೆ. ನ್ಯೂಸ್ ಪ್ರಿಂಟ್ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಸಣ್ಣ ಪತ್ರಿಕೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ ಎಂದರು.
ಹಿರಿಯ ಪತ್ರಕರ್ತ ನಾರಾಯಣ ಗಳಿಗಿ, ಪತ್ರಕರ್ತ ಅಜಿತ್ ಹನುಮಕ್ಕನವರ ಅವರನ್ನು ಸನ್ಮಾನಿಸಲಾಯಿತು.
ಲೋಕಹಿತ ಟ್ರಸ್ಟ್ನ ಕಾರ್ಯದರ್ಶಿ ಶ್ರೀಧರ ನಾಡಗೀರ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಉಪಸ್ಥಿತರಿದ್ದರು.