ಹುಬ್ಬಳ್ಳಿ: ನೀರಾ ಎಂದರೆ ಅಮಲು ತರಿಸುವ ಪಾನೀಯ ಎನ್ನುವ ಮನೋಭಾವನೆ ಅನೇಕ ಜನರಲ್ಲಿದ್ದು, ಇದು ತಪ್ಪು. ಆರೋಗ್ಯದ ದೃಷ್ಟಿಯಿಂದ ನೀರಾ ಸೇವನೆ ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಶಿರೂರು ಪಾರ್ಕ್ನಲ್ಲಿ ಭಾನುವಾರ ‘ವಸಂತ ನೀರಾ ಕೇಂದ್ರ’ ಉದ್ಘಾಟಿಸಿ ಮಾತನಾಡಿದ ಅವರು ‘ಈ ಕೇಂದ್ರದಲ್ಲಿ ಮಾರಾಟ ಮಾಡುವ ನೀರಾ ಶುದ್ಧವಾಗಿದೆ, ಯಾವುದೇ ನಶೆ ಬರುವ ಪದಾರ್ಥಗಳು ಇದರಲ್ಲಿ ಮಿಶ್ರಣವಾಗಿರುವುದಿಲ್ಲ. ಬೇರೆ, ಬೇರೆ ಕಂಪನಿಗಳ ತಂಪು ಪಾನೀಯಗಳನ್ನು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ರೈತ ಉತ್ಪಾದಕ ಸಂಸ್ಥೆಯ ನೀರಾ ಕುಡಿಯುವುದು ಉತ್ತಮ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮತ್ತು ಮಲೆನಾಡು ನಟ್ಸ್ ಸ್ಟೈಸ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮನೋಹರ ಮಸ್ಕಿ ಮಾತನಾಡಿ ‘ನೀರಾ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲಗಳು ಇವೆ. ಮೂತ್ರಪಿಂಡ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುವ ಅಂಶ ಇದರಲ್ಲಿ ಇರುತ್ತದೆ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ಪ್ರಕೃತಿದತ್ತವಾದ ಈ ಪೇಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಆಯುರ್ವೇದ ಚಿಕಿತ್ಸೆಗೆ ಬಳಸಲಾಗುತ್ತಿತ್ತು’ ಎಂದರು.
ವೈದ್ಯ ಸಚಿನ್ ಹೊಸಕಟ್ಟಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜೆಡಿಎಸ್ ಮುಖಂಡ ರಾಜಣ್ಣ ಕೊರವಿ, ಉದ್ಯಮಿ ಮಹಾದೇವ ಜೆ. ಅರಶಿದ್ಧ, ಕಿರಣ ಉಪ್ಪಾರ, ಚಂದನಾ ದೊಡ್ಡಮನಿ, ಮಹಾದೇವಿ ದೊಡ್ಡಮನಿ, ರವಿ ಸಂಗನಾಳ ಇದ್ದರು.